ವಂದೇಮಾತರಂಗೆ ಕಾಂಗ್ರೆಸ್ ವಿರೋಧ ಖಂಡನೀಯ, ದೇಶಭಕ್ತರಲ್ಲಿ ಕ್ಷಮೆಯಾಚಿಸಲು ಬಿಜೆಪಿ ಆಗ್ರಹ: ಸತೀಶ್ ಕುಂಪಲ
ಮಂಗಳೂರು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ, ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಬಡಿದೆಬ್ಬಿಸಿದ ಈಗಲೂ ದೇಶಭಕ್ತರ ಮೈಮನವನ್ನು ಪುಳಕಿತಗೊಳಿಸುವ ವಂದೇಮಾತರಂಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ.
ಜೈಲಿಗೆ ಹೋದರೂ ಪರವಾಗಿಲ್ಲ ಗೀತೆಯ ಎರಡು ಸಾಲು ಬಿಟ್ಡು ಮಿಕ್ಕಿದ್ದನ್ನು ಹಾಡವುದಿಲ್ಲ ಎಂದು ಹೇಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವಂತೆ ಕಾಂಗ್ರೆಸ್ನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ವಂದೇಮಾತರಂ ಗೀತೆಯನ್ನು ಮೊಟಕುಗೊಳಿಸುವಂತೆ ಸನ್ನೆ ಮಾಡುತ್ತಿರುವುದು, ರಾಹುಲ್ ಗಾಂಧಿ ಚಡಪಡಿಸುತ್ತಿರುವುದನ್ನು ದೇಶದ ಜನರು ಗಮನಿಸಿದ್ದಾರೆ. ದೇಶವಿರೋಧಿ ಇವರ ಮನಸ್ಥಿತಿಯನ್ನು ಅರ್ಥೈಸಿದ್ದಾರೆ. ಆದರೆ ಇಲ್ಲಿನ ಮಣ್ಣಿನಲ್ಲಿ ಹುಟ್ಟಿ ಬೆಳೆದ ಬಿ.ಕೆ. ಹರಿಪ್ರಸಾದ್ ಕೇವಲ ತಮ್ಮ ಸೋನಿಯ ಗಾಂಧಿಯ ಸಂತುಷ್ಠಿಗಾಗಿ ಭಾರತ ಮಾತೆಯ ಅವಮಾನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇವರ ನಿಷ್ಠೆ ರಾಷ್ಟ್ರ ಸಮರ್ಪಿತವಲ್ಲ ಬದಲಾಗಿ ಒಂದು ಕುಟುಂಬಕ್ಕಾಗಿ ಇರುವುದು ದೇಶದ ದುರಂತ. ದೇಶದ ಜನರು ಇವರ ಮನದಾಳದ ಚಿಂತನೆ, ಗುಪ್ತ ಯೋಜನೆಗಳನ್ನು ಅರಿಯಬೇಕು.
ವಂದೇಮಾತರಂನ ಪ್ರತೀ ಶಬ್ದಗಳಲ್ಲಿ ತಾಯಿ ಭಾರತಿಯ ಗುಣಗಾನವಿದೆ. ನಮ್ಮ ಸಂಸ್ಕೃತಿ, ಪರಂಪರೆ, ಸಮೃದ್ದ ಪ್ರಕೃತಿ, ಭಾಷಾವೈವಿಧ್ಯತೆಗಳ ಸೊಬಗಿದೆ. ಆದರೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ನಾವೇ ಹೋರಾಟ ಮಾಡಿರುವುದು ಎಂದು ಬೊಗಳೆ ಬಿಡುವ ಕಾಂಗ್ರೆಸಿಗರು, ದೇಶಭಕ್ತಿಯನ್ಜು ಉದ್ಧೀಪನಗೊಳಿಸಿದ, ಲಕ್ಷಾಂತರ ಭಾರತೀಯರನ್ನು ಬ್ರಿಟಿಷರ ವಿರುದ್ಧ ಸೆಣಸಾಡಲು ಸ್ಪೂರ್ತಿಯಾಗಿರುವ ವಂದೇಮಾತರಂ ಗೀತೆ ಕೇಳುವಾಗ, ಇರುವೆ ಕಚ್ಚಿಸಿಕೊಂಡವರಂತೆ ಉರಿಯುತ್ತಿರುವುದನ್ನು ನೋಡಿದರೆ ಇವರ ವಿಕಾರ ಮನೋಭಾವನೆಯನ್ನು ಮತ್ತು ತುಷ್ಠೀಕರಣದ ಪರಮಾವಧಿಯನ್ನು ಬಿಂಬಿಸುತ್ತದೆ. ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ವಂದೇಮಾತರಂನ್ನು ವಿರೋಧಿಸುವ ಕಾಂಗ್ರೆಸ್ಗೆ ದೇಶದ ಜನರು ಕ್ವಿಟ್ ಇಂಡಿಯಾ ಹೇಳಬೇಕಿದೆ ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.