ಅವ್ಯವಹಾರ ಆರೋಪ: ಕುರಿತು ಸಹಕಾರಿ ನಿಬಂಧಕರಿಗೆ ದೂರು
ಮಂಗಳೂರು: ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಈ ಕುರಿತು ಸಹಕಾರಿ ನಿಬಂಧಕರಿಗೆ ದೂರು ನೀಡಲಾಗಿದೆ. ಪೊಲೀಸ್ ಕಮಿಷನರ್ ಅವರಿಗೂ ದೂರು ನೀಡಲಾಗಿದೆ. ಲೆಕ್ಕಪತ್ರ ಕೇಳಿದರೆ ಕೈಕಾಲು ಕಡಿಯುವ ಬೆದರಿಕೆ ಹಾಕಿದ್ದಾರೆ ಎಂದು ಕಾರ್ಯಕಾರಿ ಸಮಿತಿ ಸದಸ್ಯ ಪವನ್ ರಾಜ್ ಆರೋಪಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದಿನ ಮಹಾಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಸುರೇಶ್ ಭಟ್ನಗರ ಹಾಗೂ ಸಂಘದ ಅಧ್ಯಕ್ಷರಾಗಿ ಉಮೇಶ್ ಬೆಂಜನಪದವು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಆದರೆ ಅಧಿಕಾರ ಹಸ್ತಾಂತರಗೊಂಡ 15 ದಿನಗಳಲ್ಲೇ ಉಮೇಶ್ ಬೆಂಜನಪದವು ವೈಯಕ್ತಿಕ ಕಾರಣ ನೀಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದಾದ ಬಳಿಕ ಹೊಸ ಮಹಾಸಭೆಯನ್ನು ಕರೆಯದೆ, ಹಲವು ಆಕ್ಷೇಪಗಳ ನಡುವೆಯೇ ಮಾಸಿಕ ಸಭೆಯಲ್ಲಿ ಚಿದಾನಂದ ಗುರಿಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಇಲ್ಲಿಂದ ಮುಂದಿನ ಆಡಳಿತ ಕ್ರಮಗಳ ಕುರಿತು ಕಾರ್ಯಕಾರಿ ಸಮಿತಿಯೊಳಗೆ ಹಲವು ಪ್ರಶ್ನೆಗಳು ಉದ್ಬವಿಸುತ್ತಾ ಬಂದಿವೆ. ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ಅವರ ಅವಧಿಯಲ್ಲಿ ನೂತನ ಸಭಾಂಗಣ ನಿರ್ಮಾಣದ ವೇಳೆ ಹಣಕಾಸಿನ ಕೊರತೆ ಉಂಟಾದಾಗ, ಅವರ ಕುಟುಂಬಕ್ಕೆ ಸೇರಿದ ಜಮೀನನ್ನು ಭಗವತಿ ಬ್ಯಾಂಕ್ನಲ್ಲಿ ಅಡಮಾನವಿಟ್ಟು ಸುಮಾರು 130 ಲಕ್ಷ ಸಾಲ ಪಡೆದು ಸಭಾಂಗಣ ನಿರ್ಮಾಣಕ್ಕೆ ಬಳಸಲಾಗಿತ್ತು ಎಂದು ಸಭೆಗಳಲ್ಲಿ ತಿಳಿಸಲಾಗಿತ್ತು. ಸಭಾಂಗಣದಿಂದ ತಿಂಗಳಿಗೆ ಸುಮಾರು 1 ಲಕ್ಷ ಬಾಡಿಗೆ ಆದಾಯ ಬರುವ ವ್ಯವಸ್ಥೆಯನ್ನು ರೂಪಿಸಿ, ಅದೇ ಆದಾಯದಿಂದ ಬ್ಯಾಂಕ್ ಸಾಲದ ಕಂತುಗಳನ್ನು ಪಾವತಿಸಲಾಗುತ್ತಿತ್ತು.
ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಚಂದ್ರಹಾಸ್ ಉಳ್ಳಾಲ್ ಅವರು ಸಾಧ್ಯವಾದಷ್ಟು ಬೇಗ ಸಾಲವನ್ನು ತೀರಿಸಿ ಅಡಮಾನದಲ್ಲಿರುವ ದಾಖಲೆಗಳನ್ನು ಹಿಂದಿರುಗಿಸುವಂತೆ ಮನವಿ ಮಾಡಿಕೊಂಡಿದ್ದರು. ನಂತರದ ಸಭೆಯಲ್ಲಿ ಬ್ಯಾಂಕ್ ಸಾಲ ಹಾಗೂ ಇತರ ಬಾಕಿಗಳನ್ನು ಸೇರಿಸಿ ಒಟ್ಟು ಸುಮಾರು 36 ಲಕ್ಷ ರೂ. ಬಾಧ್ಯತೆ ಇದೆ ಎಂದು ತಿಳಿಸಲಾಗಿತ್ತು. ಈ ಕುರಿತು ಲೆಕ್ಕಪತ್ರ ಮಂಡಿಸುವಂತೆ ಕೇಳಿದರೂ ಯಾವುದೇ ಲೆಕ್ಕಪತ್ರ ಮಂಡನೆ ಆಗಿಲ್ಲ. ಇದೇ ರೀತಿಯಾಗಿ ನಮ್ಮ ಕ್ಷೇತ್ರದಲ್ಲಿ ದಾನಿಗಳ ಸಹಕಾರದಿಂದ ಮಹಾದ್ವಾರ ನಿರ್ಮಾಣವಾಗಿದೆ. ಆದರೆ ಆ ದ್ವಾರದ ನಕ್ಷೆ, ದ್ವಾರ ನಿರ್ಮಾಣದ ಗುತ್ತಿಗೆ ಹೇಗೆ ಕೊಡುವುದು, ಯಾವ ಗುತ್ತಿಗೆದಾರರಿಗೆ ಕೊಡುವುದು, ಯಾವ ರೀತಿಯಲ್ಲಿ ನಿರ್ಮಾಣ ಮಾಡ್ತಾರೆ, ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಆರೋಪಿಸಿದರು.