ವಂಚನೆ - ಸೋಮನಾಥ ನಾಯಕ್, ರಂಜನ್ ರಾವ್ ಸ್ಪಷ್ಟೀಕರಣ
ಮಂಗಳೂರು: ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ ನಾಯಕ್ ಹಾಗೂ ರಂಜನ್ ರಾವ್ ವಿರುದ್ಧ ಶಶಿಧರ್ ಅಚ್ಯುತ ತೋಟಂತಿಲ ಎಂಬವರು ವಂಚನೆ ಮಾಡಿರುವುದಾಗಿ ಬೆಳ್ತಂಗಡಿ ಠಾಣೆಯಲ್ಲಿ ನೀಡಿದ ದೂರಿನ ಬಗ್ಗೆ ಸೋಮನಾಥ ನಾಯಕ್ ಹಾಗೂ ರಂಜನ್ ರಾವ್ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ವಿಚಾರಗಳನ್ನು ಮುಚ್ಚಿಟ್ಟು ವಂಚನೆ ಮಾಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭೂಮಿಯ ಮಾಲಕ ರಂಜನ್ ರಾವ್ ಯರ್ಡೂರು ಕರಾರು ಪ್ರಕಾರ 28.50 ಸೆಂಟ್ಸ್ ಭೂಮಿಯನ್ನು ನೋಂದಣೆ ಮಾಡಿಕೊಟ್ಟಿದ್ದಾರೆ. ಹೆಚ್ಚುವರಿ ಖರೀದಿ ಮಾಡಲು ಉದ್ದೇಶಿಸಿದ 9.25 ಸೆಂಟ್ಸ್ ನೋಂದಣಿಗೆ ಬಾಕಿ ಇರುತ್ತದೆ, ಸರ್ವೆಯರ್ಗಳ ದೀರ್ಘ ಮುಷ್ಕರದಿಂದಾಗಿ ಇದರ ನಕ್ಷೆ ಸಿದ್ಧವಾಗದೆ ನೋಂದಣೆ ಸಾಧ್ಯವಾಗಿಲ್ಲ. ನಾವು ಅವರಿಗೆ ವಂಚನೆ ಮಾಡಿಲ್ಲ, ಯಾವುದೇ ವಿಷಯ ಮುಚ್ಚಿಟ್ಟಿಲ್ಲ ಎಂದು ಮಾಹಿತಿ ನೀಡಿರುವ ಅವರು ಭೂಕಬಳಿಕೆ ನಿಷೇಧ ಕೋರ್ಟ್ನಲ್ಲಿ ದಾವೆ ಇರುವುದು ನಮಗೆ ತಿಳಿದು ಬಂದದ್ದು ನೋಂದಣೆಯಾದ ಹಲವು ದಿನಗಳ ಬಳಿಕ. ಕುಮ್ಮಿ ಭೂಮಿ ಈ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ತಹಶೀಲ್ದಾರರಿಗೆ ಕುಮ್ಮಿ ಬಗ್ಗೆ ಶಶಿಧರ್ ಹೇಳಿಕೆ ನೀಡಿದ್ದಾರೆ.
ನಮ್ಮಲ್ಲಿ ಮಾತಾಡದೆ ಏಕಾಏಕಿ ಪೊಲೀಸ್ ದೂರು ನೀಡಿದ್ದಾರೆ, ಅವರಿಗೆ ನಾವು ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇವೆ. ನೋಂದಣೆಯ ಮೊದಲೇ ಭೂಮಿ ಅವರ ಸ್ವಾಧೀನಕ್ಕೆ ಕೋಟ್ಟಿದ್ದೇವೆ. ಅವರು ಸಜ್ಜನರು. ಯಾರದ್ದೋ ಕುಮ್ಮಕ್ಕಿನಿಂದ ದೂರು ನೀಡಿರಬಹುದೆಂದು ನಮ್ಮ ಭಾವನೆ. ಅವರಿಗೆ ಭೂಮಿ ಬೇಡವೆಂದಾದಲ್ಲಿ ತಿಳಿಸಲಿ. ಅವರಿಗೆ ನಷ್ಟವಾಗದಂತೆ ಹಣ ಹಿಂತಿರುಗಿಸಲು ನಾವು ಸಿದ್ಧರಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.