ಕರಾವಳಿಯಲ್ಲಿ ಅಡಿಕೆ ರೋಗ ತಡೆಗೆ ಕೇಂದ್ರದಿಂದ ಬೆಂಬಲ: ಕ್ಯಾ. ಚೌಟಗೆ ಸಚಿವ ಶಿವರಾಜ್ ಚೌಹಾಣ್ ಭರವಸೆ

ಕರಾವಳಿಯಲ್ಲಿ ಅಡಿಕೆ ರೋಗ ತಡೆಗೆ ಕೇಂದ್ರದಿಂದ ಬೆಂಬಲ: ಕ್ಯಾ. ಚೌಟಗೆ ಸಚಿವ ಶಿವರಾಜ್ ಚೌಹಾಣ್ ಭರವಸೆ

ನಿಯಮ 377ರ ಅಡಿಯಲ್ಲಿ  ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆಚುಕ್ಕಿಯಂಥಹ ವಿವಿಧ ರೋಗಗಳ ನಿಯಂತ್ರಣಕ್ಕೆ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಹಾಗೂ ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಕ್ಯಾ. ಚೌಟ ಅವರು ಪ್ರಸ್ತಾಪಿಸಿರುವ ಈ ವಿಷಯಕ್ಕೆ ಉತ್ತರಿಸಿರುವ ಸಚಿವರು, ಈ ಮಾಹಿತಿ ಹಂಚಿಕೊಂಡಿದ್ದಾರೆ. ಅಡಿಕೆ ಬೆಳೆಗೆ ಬಾಧಿಸುತ್ತಿರುವ ಪ್ರಮುಖ ರೋಗಗಳ ನಿಯಂತ್ರಣಕ್ಕೆ ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ICAR-CPCRI) ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಬಗ್ಗೆ ಸಚಿವರು ವಿವರಿಸಿದ್ದಾರೆ.

ಅಡಿಕೆಗೆ ಬಾಧಿಸುವ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಗಳ ಕುರಿತು ಸಂಶೋಧನೆ ಮತ್ತು ಕ್ಷೇತ್ರ ಮಟ್ಟದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳ್ತಂಗಡಿ ಹಾಗೂ ಸುಳ್ಯ ಸೇರಿದಂತೆ ಏಳು ಕ್ಲಸ್ಟರ್‌ಗಳಲ್ಲಿ ಶಿಫಾರಸು ಮಾಡಲಾದ ಸಮಗ್ರ ರೋಗ ನಿರ್ವಹಣಾ ಪದ್ಧತಿಗಳ ಕ್ಷೇತ್ರ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಅವುಗಳನ್ನು ಅಳವಡಿಸಿಕೊಂಡ ಬಳಿಕ ರೋಗ ಬಾಧಿತ ಅಡಿಕೆ ತೋಟಗಳಲ್ಲಿ ರೋಗದ ತೀವ್ರತೆ ಕೂಡ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಅವರು ಸಚಿವ ಚೌಹಾಣ್‌ ಅವರು ಹೇಳಿದ್ದಾರೆ.

ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕಾಗಿ ಮುಂಗಾರು ಆರಂಭಕ್ಕೂ ಮುನ್ನ ಹಾಗೂ ಮುಂಗಾರು ಅವಧಿಯಲ್ಲಿ ಶಿಫಾರಸು ಮಾಡಲಾದ ಶಿಲೀಂಧ್ರ ನಾಶಕಗಳನ್ನು ಸೂಕ್ತ ಸಮಯದಲ್ಲಿ ಬಳಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ರಮಗಳನ್ನು ಅನುಸರಿಸಿದ ಬಳಿಕವೂ ರೋಗದ ಪ್ರಮಾಣ ಕಡಿಮೆಯಾಗುವುದರ ಜತೆಗೆ ಅಡಿಕೆ ಇಳುವರಿಯಲ್ಲೂ ಸುಧಾರಣೆ ಕಂಡುಬಂದಿರುವ ಬಗ್ಗೆ ಕ್ಷೇತ್ರ ಅಧ್ಯಯನಗಳಿಂದ ಗೊತ್ತಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಳದಿ ಎಲೆ ರೋಗದ ನಿಯಂತ್ರಣ ಹಾಗೂ ಉತ್ತಮ ರೀತಿಯ ಸಸಿ ನೆಡುವ ವ್ಯವಸ್ಥೆ ಅಳವಡಿಕೆ ಸೇರಿದಂತೆ ನಾನಾ ಆಯಾಗಳಲ್ಲಿ ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಯುತ್ತಿದೆ. ರೋಗದ ಪ್ರಮಾಣ ಕಡಿಮೆ ಇರುವ ಪ್ರದೇಶಗಳ ರೈತರ ತೋಟಗಳಲ್ಲಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಗುತ್ತಿದ್ದು, ಇದಕ್ಕೆ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಸಹಕಾರವನ್ನು ಕೂಡ ಪೆಡೆದುಕೊಳ್ಳಲಾಗಿದೆ ಎಂದರು. 

ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಸೇರಿದಂತೆ ಅತಿಹೆಚ್ಚು ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ವರದಿಯಾಗಿರುವ ಎಲೆ ಚುಕ್ಕೆ ರೋಗದ ಸಮಸ್ಯೆಯ ಬಗ್ಗೆಯೂ ಕೃಷಿ ಸಚಿವಾಲಯ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. 2022ರ ನವೆಂಬರ್‌ನಲ್ಲಿ ರಚಿಸಲಾಗಿದ್ದ ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿ ಕೂಡ ಈ ಅಡಿಕೆ ರೋಗಗಳ ಬಗ್ಗೆ ಪರಿಶೀಲಿಸಿ, ಕ್ಷೇತ್ರ ಸಮೀಕ್ಷೆಗಳು, ರೈತರು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ಮತ್ತು ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಸಮಗ್ರ ರೋಗ ನಿರ್ವಹಣಾ ಕಾರ್ಯತಂತ್ರಗಳನ್ನು ಶಿಫಾರಸು ಮಾಡಿದೆ ಎಂದು ಕೃಷಿ ಸಚಿವ ಚೌಹಾಣ್ ಮಾಹಿತಿ ನೀಡಿದ್ದಾರೆ.

ಈ ಸಂಶೋಧನಾ ಸಂಸ್ಥೆಗಳು ಶಿಫಾರಸು ಮಾಡಲಾದ ಕ್ರಮಗಳನ್ನು ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ (MIDH)ನಡಿಯಲ್ಲಿ ಅಡಿಕೆ ಬೆಳೆಗೆ ರೋಗ ಬಾಧಿತ ಪ್ರದೇಶಗಳಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಸಚಿವಾಲಯ ಉಲ್ಲೇಖಿಸಿರುವ ಏಳು ಕ್ಲಸ್ಟರ್‌ಗಳಲ್ಲಿ ಶಿರಸಿ, ಸಿದ್ದಾಪುರ, ಬೆಳ್ತಂಗಡಿ ಹಾಗೂ ಸುಳ್ಯ ಸೇರಿದಂತೆ ವಿವಿಧ ಪ್ರದೇಶಗಳು ಒಳಗೊಂಡಿದ್ದು, ಶಿಫಾರಸು ಮಾಡಲಾದ ಕ್ರಮಗಳನ್ನು ಅಳವಡಿಸಿಕೊಂಡ ಬಳಿಕ ರೋಗದ ತೀವ್ರತೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಎಲೆ ಚುಕ್ಕೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಕ್ಕಪಕ್ಕದ ತೋಟಗಳಲ್ಲಿಯೂ ಶಿಫಾರಸು ಮಾಡಲಾದ ಕ್ರಮಗಳನ್ನು ಸಮನ್ವಯದಿಂದ ಅನುಸರಿಸುವ ಅಗತ್ಯವಿದೆ. ಹೀಗಾಗಿ ಸಮುದಾಯ ಆಧಾರಿತ ರೋಗ ನಿರ್ವಹಣೆ, ಕ್ಷೇತ್ರ ಪ್ರಾತ್ಯಕ್ಷಿಕೆ, ರೈತರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವೈಜ್ಞಾನಿಕವಾದ  ಕ್ರಮಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಯುವ ರೈತರ ಹಿತ ಕಾಪಾಡುವುದರ ಜತೆಗೆ ಅಡಿಕೆ ಕೃಷಿಯ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಾಸರಗೋಡಿನ ICAR-CPCRI ಸಂಸ್ಥೆಯು ಅಡಿಕೆ ಬೆಳೆಗಳನ್ನು ಬಾಧಿಸುವ ಪ್ರಮುಖ ರೋಗಗಳ ಕುರಿತು ತನ್ನ ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿಯೂ  ಅಗತ್ಯ ತಾಂತ್ರಿಕ ನೆರವು ಮತ್ತು ಸಹಕಾರವನ್ನು ಒದಗಿಸಲಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕ್ಯಾ. ಚೌಟ ಅವರಿಗೆ ನೀಡಿದ ಸುಧೀರ್ಘವಾದ ಉತ್ತರದಲ್ಲಿ ಭರವಸೆ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article