ಇಂಡಿಯಾನಾ ಆಸ್ಪತ್ರೆಯಲ್ಲಿ ಅವಧಿಪೂರ್ವ ನವಜಾತ ಶಿಶುವಿಗೆ ಜೀವ ನೀಡಿದ ವೈದ್ಯರು
ಪ್ರಸ್ತುತ ಸುಮಾರು ನಾಲ್ಕು ತಿಂಗಳ ವಯಸ್ಸಿನ ಈ ಮಗುವನ್ನು ಯಾವುದೇ ಆಮ್ಲಜನಕದ (ಆಕ್ಸಿಜನ್) ಬೆಂಬಲವಿಲ್ಲದೆ ಸ್ಥಿರ ಸ್ಥಿತಿಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ. ಮಗು ಚೆನ್ನಾಗಿ ಹಾಲು ಕುಡಿಯುತ್ತಿದ್ದು, ತೂಕ ಹೆಚ್ಚಿಸಿಕೊಳ್ಳುತ್ತಿದೆ. ಜೊತೆಗೆ ಮಗುವಿನ ಕಣ್ಣು, ಕಿವಿ ಮತ್ತು ನರಮಂಡಲದ ತಪಾಸಣೆಗಳು ಸಹಜವಾಗಿವೆ.
ಮಗುವಿನ ಈ ಅದ್ಭುತ ಚೇತರಿಕೆಯು ಇಡೀ ಎನ್ಐಸಿಯು ತಂಡಕ್ಕೆ ಸ್ಫೂರ್ತಿಯ ಮೂಲವಾಗಿದೆ. ಅತ್ಯಾಧುನಿಕ ನವಜಾತ ಶಿಶು ಆರೈಕೆ, ಸಮರ್ಪಿತ ತಂಡದ ಕೆಲಸ ಮತ್ತು ಪೋಷಕರ ಅಚಲ ಭರವಸೆಗಳು ಹೇಗೆ ಒಂದಾಗಿ ಧನಾತ್ಮಕ ಫಲಿತಾಂಶವನ್ನು ನೀಡಬಲ್ಲವು ಎಂಬುದಕ್ಕೆ ಇದು ಒಂದು ಹೃದಯಸ್ಪರ್ಶಿ ಉದಾಹರಣೆಯಾಗಿದೆ.
24 ವಾರಗಳಲ್ಲಿ ಜನಿಸುವ ಮಗುವು ಅತ್ಯಂತ ಅವಧಿಪೂರ್ವ ಶಿಶುವಾಗಿದ್ದು, ಶ್ವಾಸಕೋಶ, ಮೆದುಳು, ಕರುಳು, ಕಣ್ಣುಗಳು ಮತ್ತು ರೋಗನಿರೋಧಕ ವ್ಯವಸ್ಥೆ ಸೇರಿದಂತೆ ಹಲವು ಅಂಗಗಳು ಇನ್ನೂ ಅಭಿವೃದ್ಧಿಯ ಅತ್ಯಂತ ಆರಂಭಿಕ ಹಂತದಲ್ಲಿರುತ್ತವೆ. ಈ ನವಜಾತ ಶಿಶುವು ಆಸ್ಪತ್ರೆಯ ವಾಸ್ತವ್ಯದ ಸಮಯದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿತು. ನಿರಂತರ ಮೇಲ್ವಿಚಾರಣೆ, ಉಸಿರಾಟದ ಬೆಂಬಲ, ಜಾಗರೂಕ ಪೌಷ್ಟಿಕಾಂಶ ನಿರ್ವಹಣೆ, ಸೋಂಕು ತಡೆಗಟ್ಟುವಿಕೆ ಮತ್ತು ವಿವಿಧ ವಿಭಾಗಗಳ ಸಂಯೋಜಿತ ಚಿಕಿತ್ಸೆಯ ಅಗತ್ಯವಿತ್ತು.
ಡಾ. ಅಲಿ ಕುಂಬ್ಳೆ ಮಾತನಾಡಿ, ಮಗುವಿನ ಚೇತರಿಕೆಯು ಇಡೀ ಆಸ್ಪತ್ರೆ ತಂಡದ ಬದ್ಧತೆ ಮತ್ತು ಅತ್ಯಾಧುನಿಕ ನವಜಾತ ಶಿಶು ಸೌಲಭ್ಯಗಳ ಲಭ್ಯತೆಯನ್ನು ಪ್ರತಿಬಿಂಬಿಸುತ್ತದೆ. ಈ ಮಗುವಿನ ಪ್ರಯಾಣವು ಧೈರ್ಯ, ಪರಿಶ್ರಮ ಮತ್ತು ಸಂಯೋಜಿತ ವೈದ್ಯಕೀಯ ಆರೈಕೆಯನ್ನು ಪ್ರತಿನಿಧಿಸುತ್ತದೆ. ಸಕಾಲಿಕ ಮಧ್ಯಪ್ರವೇಶ, ಸುಧಾರಿತ ಎನ್ಐಟಿಯು ಸೌಲಭ್ಯಗಳು, ನಿರಂತರ ತಜ್ಞರ ಮೇಲ್ವಿಚಾರಣೆ ಮತ್ತು ನಮ್ಮ ವೈದ್ಯರು ಹಾಗೂ ಶುಶ್ರೂಷಾ (ನರ್ಸಿಂಗ್) ತಂಡದ ಅಡೆತಡೆ ಇಲ್ಲದ ಶ್ರಮದಿಂದ ಈ ಫಲಿತಾಂಶ ಸಾಧ್ಯವಾಗಿದೆ. ಅತ್ಯಂತ ಅವಧಿಪೂರ್ವ ಮಗುವನ್ನು ಆರೈಕೆ ಮಾಡುವುದು ಅನಿಶ್ಚಿತತೆಯಿಂದ ಕೂಡಿದ ಸುದೀರ್ಘ ಪ್ರಯಾಣವಾಗಿದೆ ಎಂದು ಹೇಳಿದರು.
ಡಾ. ಅಭಿಷೇಕ್ ಕೆ. ಫಡ್ಕೆ ಮಾತನಾಡಿ, ಇಂತಹ ಮಕ್ಕಳ ಆರೈಕೆಯ ಸಂಕೀರ್ಣತೆಯು ಮಗುವಿನ ಹುಟ್ಟಿನ ತೂಕಕ್ಕಿಂತ ಹೆಚ್ಚಾಗಿ ಗರ್ಭಾವಸ್ಥೆಯ ಅವಧಿಯ ಮೇಲೆ ನಿರ್ಧರಿತವಾಗುತ್ತದೆ. ಅತ್ಯಂತ ಅವಧಿಪೂರ್ವ ಶಿಶುಗಳಲ್ಲಿ, ಚಿಕಿತ್ಸೆಯನ್ನು ಕಷ್ಟಕರವಾಗಿಸುವುದು ಕೇವಲ ಕಡಿಮೆ ತೂಕವಲ್ಲ. ಕಡಿಮೆ ಗರ್ಭಾವಸ್ಥೆಯ ಅವಧಿ ಎಂದರೆ ಮಗುವಿನ ಪ್ರತಿಯೊಂದು ಅಂಗ ವ್ಯವಸ್ಥೆಯು ಹೆಚ್ಚು ಅಪಕ್ವ ಮತ್ತು ಸೂಕ್ಷ್ಮವಾಗಿರುತ್ತದೆ. ೨೪ ವಾರಗಳಲ್ಲಿ ಜನಿಸಿದ ಮಗುವು ಅದೇ ತೂಕದ ಹೆಚ್ಚು ಪಕ್ವವಾದ ಮಗುವಿಗಿಂತ ಶಾರೀರಿಕವಾಗಿ ತೀರಾ ಭಿನ್ನವಾಗಿರುತ್ತದೆ. ಈ ಮಕ್ಕಳು ಪೂರ್ಣಾವಧಿಯ ಶಿಶುಗಳ ಸಣ್ಣ ಆವೃತ್ತಿಗಳಷ್ಟೇ ಅಲ್ಲ ಎಂದು ತಿಳಿಸಿದರು.
ಚಿಕಿತ್ಸೆ ನೀಡಿದ ವೈದ್ಯರ ತಂಡದಲ್ಲಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಮತ್ತು ಅಧ್ಯಕ್ಷ ಪ್ರೊ. ಡಾ. ಅಲಿ ಕುಂಬ್ಳೆ, ಹಿರಿಯ ನವಜಾತ ಶಿಶು ತಜ್ಞ ಡಾ. ಅಭಿಷೇಕ್ ಕೆ. ಫಡ್ಕೆ, ಮಕ್ಕಳ ಶಸ್ತ್ರಚಿಕಿತ್ಸಕ ಡಾ. ವಿಜಯ್ ಮಹಾಂತೇಶ ಎಸ್. ಸಮಾಳದ್, ಮತ್ತು ಮಕ್ಕಳ ಹೃದ್ರೋಗ ತಜ್ಞ ಡಾ. ಸತೀಶ್ ಕುಮಾರ್ ಬಿ. ಎಸ್. ಸೇರಿದ್ದು, ಆಸ್ಪತ್ರೆಯ ಎನ್ಐಸಿಯು ವೈದ್ಯರು, ದಾದಿಯರು ಮತ್ತು ಇತರೆ ಆರೋಗ್ಯ ಸಿಬ್ಬಂದಿ ಬೆಂಬಲ ನೀಡಿದರು.