ಆಳ್ವಾಸ್ ಆಯುರ್ವೇದದಿಂದ ಆಟಿ ಅಮಾವಾಸ್ಯೆ: 3 ಸಾವಿರಕ್ಕೂ ಅಧಿಕ ಮಂದಿಗೆ ಕಷಾಯ ವಿತರಣೆ
Wednesday, August 12, 2026
ಮೂಡುಬಿದಿರೆ: ಆಟಿ ಅಮಾವಾಸ್ಯೆ ಅಂಗವಾಗಿ ವಿದ್ಯಾಗಿರಿಯ ಆಳ್ವಾಸ್ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಪರಂಪರೆಯಂತೆ ತಯಾರಿಸಿ ಆಟಿ ಕಷಾಯವನ್ನು ತಯಾರಿಸಿ ಉಚಿತವಾಗಿ ವಿತರಿಸಲಾಯಿತು.
ಬಿ.ಎಸ್.ಎನ್.ಎಲ್.ನ ನಿವೃತ್ತ ಅಧಿಕಾರಿ ಕೃಷ್ಣವೇಣಿ ಅವರು ಆಟಿ ಕಷಾಯ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ, ಹಾಗೂ ಆತ್ಮ ರಿಸರ್ಚ್ ಸೆಂಟರಿನ ನಿರ್ದೇಶಕರೂ ಆಗಿರುವ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಪದ್ಯಾಣ ಆಟಿ ಕಷಾಯದ ಮಹತ್ವವನ್ನು ತಿಳಿಸಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ್ ಶೆಟ್ಟಿ, ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖ ಪೈ ಉಪಸ್ಥಿತರಿದ್ದರು.
ಡಾ. ಸೌಜನ್ಯ ಪ್ರಾರ್ಥನೆ ನೆರವೇರಿಸಿದರು. ಡಾ. ಲಕ್ಷ್ಮೀ ಪೈ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೃಂದ, ಉಪಾನ್ಯಸಕ ವೃಂದ ಹಾಗೂ ಸಾರ್ವಜನಿಕರು ಸೇರಿ ಸುಮಾರು 3,000 ಕ್ಕಿಂತಲೂ ಅಧಿಕ ಮಂದಿಗೆ ಆಟಿ ಕಷಾಯವನ್ನು ವಿತರಿಸಲಾಯಿತು.