ಸ್ವಾತಂತ್ರ್ಯ ಹಕ್ಕಿನೊಂದಿಗೆ ಕರ್ತವ್ಯ ಮತ್ತು ಜವಾಬ್ದಾರಿಯನ್ನೂ ಒಳಗೊಂಡಿದೆ: ಕ್ಯಾಪ್ಟನ್ ಕಾರ್ಣಿಕ್
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಪಾಲಕರು, ಪೋಷಕರು ಹಾಗೂ ಊರಿನ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯೋತ್ತರ ಭಾರತದ ಸಾಧನೆ, ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ, ಸಂವಿಧಾನ, ವೈವಿಧ್ಯತೆಯಲ್ಲಿ ಏಕತೆ ಹಾಗೂ ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರದ ಕುರಿತು ವಿವರವಾಗಿ ಮಾತನಾಡಿದರು.
ಯುವಜನರೇ ವಿಕಸಿತ ಭಾರತದ ಶಕ್ತಿ:
ಭಾರತವು ಇಂದು ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ಔಷಧ, ಡಿಜಿಟಲ್ ತಂತ್ರಜ್ಞಾನ, ರಕ್ಷಣಾ ಕ್ಷೇತ್ರ, ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಹಾಗೂ ವೈಜ್ಞಾನಿಕ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು. ಯುವಕರು ಕೇವಲ ತಂತ್ರಜ್ಞಾನದ ಬಳಕೆದಾರರಾಗದೆ, ಆವಿಷ್ಕಾರಕರು, ಉದ್ಯಮಿಗಳು, ವಿಜ್ಞಾನಿಗಳು, ವೃತ್ತಿಪರರು ಹಾಗೂ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಪ್ರತಿಷ್ಠಾನದ ವ್ಯವಸ್ಥಾಪಕ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ, ಆಡಳಿತ ಮಂಡಳಿಯ ಬಾಲಕೃಷ್ಣ ಆಳ್ವ, ಡಾ ಹನ ಶೆಟ್ಟಿ, ಡಾ. ಗ್ರೀಷ್ಮಾ ಆಳ್ವ ಇದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ, ಪಾಲಕರು, ಊರಿನ ಗಣ್ಯರು ಸಂಭ್ರಮದಲ್ಲಿ ಪಾಲ್ಗೊಂಡರು.
ಉಪನ್ಯಾಸಕರಾದ ವೇಣುಗೋಪಾಲ ಕೆ. ಶೆಟ್ಟಿ ಹಾಗೂ ಡಾ.ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಪರೇಡ್ ಕಮಾಂಡರ್ ಆಗಿ ಎನ್ಸಿಸಿ ಕೆಡೆಟ್ ಕ್ಯಾಪ್ಟನ್ ಯದುನಂದನ್ ಹಾಗೂ ಗೌರವ ವಂದನೆಯನ್ನು ಪಿಒ ಕೆಡೆಟ್ ಹಾರ್ದಿಕ್ ಹರ್ಷ ಶೆಟ್ಟಿ ನೆರವೇರಿಸಿಕೊಟ್ಟರು.
ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿ 2,550 ವಿದ್ಯಾರ್ಥಿಗಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಸಂಯೋಜನೆಯ ಮೂಲಕ ಮೈದಾನದಲ್ಲಿ ವಿಶಾಲವಾದ ರಾಷ್ಟ್ರಧ್ವಜದ ಚಿತ್ರಣವನ್ನು ಮೂಡಿಸಿದರು. 8,350 ವಿದ್ಯಾರ್ಥಿಗಳು ಆಕಾಶ ನೀಲಿ ಬಣ್ಣದ ಟೀ ಶಾರ್ಟನ್ನು ಧರಿಸಿ ನಿಂತರೆ, 1,935 ವಿದ್ಯಾರ್ಥಿಗಳು ಮೈದಾನದ ಸುತ್ತಲಿನ ಗಡಿಭಾಗವನ್ನು ಆವರಿಸುವಂತೆ ಶಿಸ್ತಿನಿಂದ ಸಾಲಾಗಿ ನಿಂತು, ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಸಮನ್ವಯದಲ್ಲಿ ಮನಮೋಹಕ ತ್ರಿವರ್ಣದ ವಿನ್ಯಾಸವನ್ನು ರೂಪಿಸಿದರು. ತ್ರಿವರ್ಣದ ಬ್ಲಾಸ್ಟರ್ಗಳು ಮತ್ತು ಬ್ಲೋವರ್ಗಳು ಕಾರ್ಯಕ್ರಮದ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದರೆ, ತ್ರಿವರ್ಣದಲ್ಲಿ ಕಂಗೊಳಿಸಿದ ಸಿಂಹಗಳು ಮತ್ತು ಆವರಣದಲ್ಲಿದ್ದ ಸಿಲಿಂಡರ್ ಆಕಾರದ ಕಂಬಗಳಿಗೆ ತ್ರಿವರ್ಣದ ಬಣ್ಣಗಳ ಅಲಂಕಾರ ಸ್ವಾತಂತ್ರ್ಯ ದಿನಾಚರಣೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ಕೇಸರಿ, ಬಿಳಿ, ಹಸಿರು ತ್ರಿವರ್ಣ ರಂಗಿನ ಧಿರಿಸಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಧ್ವಜವನ್ನು ಅಲೆಯಂತೆ ಬೀಸುತ್ತಿದ್ದಾಗ, ದೇಶಭಕ್ತಿಯ ಅಭಿಮಾನದ ಸಾಗರವೇ ಉಕ್ಕಿಬಂತು.
ವಿಶೇಷ ಸಂಗೀತ ಕಾರ್ಯಕ್ರಮ:
ಅಜಯ್ ವಾರಿಯರ್ ತಂಡದ ವತಿಯಿಂದ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನಪ್ರಿಯ ದೇಶ ಭಕ್ತಿಗೀತೆಗಳು, ಸುಮಧುರ ಸಂಗೀತ ಹಾಗೂ ಮನಮೋಹಕ ಗಾಯನದ ಮೂಲಕ ಕಲಾವಿದರು ವಿದ್ಯಾರ್ಥಿಗಳನ್ನು ರಂಜಿಸಿದರು.