ಇರಾ ಸರಕಾರಿ ಶಾಲೆಗೆ ಎನ್ಸಿ ಮೂರ್ತಿ ಡಾ. ಜೀವನ್ ಸ್ಟೆಮ್ ಲ್ಯಾಬ್ ಕೊಡುಗೆ
ಸಮಾಜ ಕಾರ್ಯ ಸಂಸ್ಥೆ ಜನ ಶಿಕ್ಷಣ ಟ್ರಸ್ಟ್ ಮೂಲಕ ಈಗಾಗಲೇ ಉಳ್ಳಾಲ ಮತ್ತು ಪುತ್ತೂರು ತಾಲೂಕಿನ ಆಯ್ದ 17 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಸಂವಹನ ಜೀವನ ಕೌಶಲ ವಿಶೇಷ ಕಲಿಕಾ ಯೋಜನೆಯನ್ನು ಪ್ರಾಯೋಜಿಸಿದ ಎನ್ಸಿ ಮೂರ್ತಿ ಡಾ. ಜೀವನ್ ಅವರು ಇರಾ ಶಾಲೆಯಲ್ಲಿ 2.42 ಲಕ್ಷ ರೂ. ವೆಚ್ಚದಲ್ಲಿ ಪ್ರಾರಂಭಿಸಿದ ಈ ಲ್ಯಾಬ್ ಜಿಲ್ಲೆಯ 2ನೇ ಲ್ಯಾಬ್ ಆಗಿದೆ.
ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಸ್ಟೆಮ್ ಲ್ಯಾಬ್ ಮೂಲಕ ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಗುಣಮಟ್ಟದ ವಿಶ್ವ ದರ್ಜೆಯ ಶಿಕ್ಷಣ ನೀಡಿ ಕೌಶಲ ಗ್ರಾಮ ಭಾರತ ಕಟ್ಟುವ ಉದ್ದೇಶದಿಂದ ಸ್ಟೆಮ್ ಲ್ಯಾಬ್ಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಎನ್.ಸಿ ಮೂರ್ತಿ ತಿಳಿಸಿದರು.
ಶಿಕ್ಷಣ ತಜ್ಞ ವಿನಯ್ ಚೌಹಾಣ್ ಇಂಗ್ಲಿಷ್ ಸಂವಹನ ಜೀವನ ಕೌಶಲ ತರಬೇತಿ ಪಡೆಯುತ್ತಿರುವ ಮಕ್ಕಳ ಕಲಿಕಾ ಪ್ರಗತಿ ಪ್ರದರ್ಶನ ವೀಕ್ಷಿಸಿ ಕಲಿಕಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಟೆಮ್ ಲ್ಯಾಬ್ ಒದಗಿಸಿ ವಿಶೇಷ ಕಲಿಕೆಗೆ ಪ್ರೋತ್ಸಾಹಿಸುತ್ತಿರುವ ಮೂರ್ತಿ ದಂಪತಿಗಳಿಗೆ ಅಭಿನಂದಿಸಿ ಶಿಕ್ಷಕ ವೃಂದ ಮತ್ತು ಎಸ್ಡಿಎಮ್ಸಿಯ ಸಾಮೂಹಿಕ ಶ್ರಮವನ್ನು ಶ್ಲಾಘಿಸಿದರು.
ಇಂಗ್ಲಿಷ್ ಸಂವಹನ ಜೀವನ ಕೌಶಲ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸ್ವಯಂ ಪರಿಚಯದೊಂದಿಗೆ ಶಾಲೆ, ಜಿಲ್ಲೆ ಬಗ್ಗೆ ಸುಲಲಿತವಾಗಿ ಇಂಗ್ಲಿಷ್ನಲ್ಲಿ ಮಾತನಾಡಿ ಹಾಡು, ಅಭಿನಯ, ಚಟುವಟಿಕೆಗಳ ಮೂಲಕ ಕಲಿಕೆ ಪ್ರಗತಿ ಪ್ರದರ್ಶಿದರು.
ವಿದ್ಯಾರ್ಥಿನಿ ಹಸೀನಾ ವಿಜ್ಞಾನ ಶಿಕ್ಷಕಿ ಆರತಿ ಸ್ಟೆಮ್ ಲ್ಯಾಬ್ ಮೂಲಕ ಪ್ರಾಯೋಗಿಕ ಕಲಿಕೆಗೆ ನೆರವಾದ ದಾನಿಗಳಿಗೆ ಅಭಿನಂದಿಸಿದರು. ಜನ ಶಿಕ್ಷಣ ನಿರ್ದೇಶಕ ಶೀನ ಶೆಟ್ಟಿ, ಎಸ್ಡಿಎಮ್ಸಿ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷೆ ಪ್ರಮೀಳಾ ಹಾಗೂ ಸದಸ್ಯರು, ಎಕ್ಸ್ಪರಿಮೈಂಡ್ ಲ್ಯಾಬ್ನ ಆನಂದ್, ಸಮಾಲೋಚಕ ವಿಶ್ವಾಸ್ ಹಾಗೂ ವಿದ್ಯಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸೋನಿತ ಕೆ. ಸ್ವಾಗತಿಸಿದರು. ಶಿಕ್ಷಕಿಯರಾದ ವಿಕ್ಟೋರಿಯಾ ಡಿ ಸೋಜಾ ನಿರೂಪಿಸಿ, ವಿಜಯ ಕಮಾರಿ ವಂದಿಸಿದರು. ಎಸ್.ಐ.ವಿ ಶಿಕ್ಷಕಿ ರೆನ್ನಿ ಡಿಸೋಜ, ಕ್ಲಸ್ಟರ್ ಸಂಯೋಜಕ ಶಶಿಕಾಂತ್ ಹಾಗೂ ಶಿಕ್ಷಕ ವೃಂದದವರು ಸಹಕರಿಸಿದರು.