ದರ್ಭೆಯಲ್ಲಿ ನಡೆದ ಹಲ್ಲೆ-ಗಲಾಟೆ ಪ್ರಕರಣ, 7 ಮಂದಿ ವಿರುದ್ಧ ಕೇಸು: ಓರ್ವನ ಬಂಧನ
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಫಾತಿಮಾತ್ ಮಿಸ್ವಾನ್ (32) ನೀಡಿದ ದೂರಿನ ಪ್ರಕಾರ ಆ.21ರಂದು ತನ್ನ ಸಹೋದರ ಮತ್ತು ಸಹೋದರಿಯ ಜತೆಗೆ ಪುತ್ತೂರಿಗೆ ಬಂದಿದ್ದ ಸಂದರ್ಭ ಕೆಲವೊಂದು ದಾಖಲಾತಿಗಳ ಪ್ರಿಂಟ್ ಹಾಗೂ ಲ್ಯಾಮಿನೇಷನ್ ಮಾಡಿಸಲು ಈ ಗ್ರೀಮ್ ಡೆಸ್ಟಿನೇಷನ್ ಜನಸೇವಾಕೇಂದ್ರದಲ್ಲಿ ನೀಡಿದ್ದರು. ಆದರೆ ಅದರಲ್ಲಿ ಜನನಪತ್ರ ದಾಖಲಾತಿ ಮೆಲ್ಟ್ ಆಗಿ ಹಾಳಾಗಿತ್ತು. ಅದನ್ನು ಸರಿಪಡಿಸಿಕೊಡಬೇಕು. ಇಲ್ಲವಾದರೆ ಹೊಸ ದಾಖಲಾತಿ ಪಡೆಯಲು ತಗಲುವ ವೆಚ್ಚ ರೂ.300 ನೀಡಬೇಕು ಎಂದು ಕೇಳಿದ್ದರು. ಈ ವಿಚಾರದಲ್ಲಿ ಅಂಗಡಿ ಮಾಲಕಿ ಅಂಜನಾ ಪೈ ಹಾಗೂ ಸುದರ್ಶನ ಪೈ ಅವ್ಯಾಚ್ಛ ಶಬ್ದಗಳಿಂದ ಬೈದು ಫಾತಿಮಾತ್ ಮಿಸ್ವಾನ್, ಸಹೋದರ ಮತ್ತು ಸಹೋದರಿ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಲಾಟೆಯಲ್ಲಿ ಗಾಯಗೊಂಡವರನ್ನು ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿಗೆ ಸಂಬಂಧಿಸಿ ಆರೋಪಿ ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಂಗಡಿ ಮಾಲಕಿ ದೂರು-ಮತ್ತೊಂದು ಪ್ರಕರಣ
ಈ ಘಟನೆಗೆ ಸಂಬಂಧಿಸಿ ಡೀಮ್ ಡೆಸ್ಟಿನೇಷನ್ ಜನಸೇವಾಕೇಂದ್ರದ ಮಾಲಕಿ ಅಂಜನಾ ಪೈ ಅವರು ಕೂಡಾ ದೂರು ನೀಡಿದ್ದು, ಮಹಿಳೆಯೊಬ್ಬರು ಲ್ಯಾಮಿನೇಷನ್ ಮಾಡಲು ನೀಡಲಾದ ದಾಖಲಾತಿಯೊಂದು ತಾಂತ್ರಿಕದೋಷದಿಂದ ಮೆಲ್ಟ್ ಆಗಿತ್ತು. ಈ ವಿಚಾರದಲ್ಲಿ ಮಹಿಳೆ ಗಲಾಟೆ ಮಾಡುತ್ತಿದ್ದಾರೆ ಎಂದು ಸಿಬಂದಿ ತಿಳಿಸಿದ ಕಾರಣಕ್ಕೆ ಅಂಗಡಿಗೆ ತೆರಳಿದ್ದೆ. ಈ ವೇಳೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಗಲಾಟೆ
ನಡೆಯುತ್ತಿತ್ತು. ದಾಖಲಾತಿ ನೀಡಬೇಕು ಇಲ್ಲವೇ ರೂ.10 ಸಾವಿರ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಅವರನ್ನು ನಾನು ಸಮಾಧಾನ ಪಡಿಸಲು ಯತ್ನಿಸಿದಾಗ ವೀಡಿಯೋ ಮಾಡಲು ಮುಂದಾಗಿ ಅವ್ಯಾಚ್ಛ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿ ಫಾತಿಮಾತ್ ಮಿಸ್ವಾನ್, ಮುಬಾಶಿರಾ ಮತ್ತು ಮುಬಾರಿಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕರ್ತವ್ಯಕ್ಕೆ ಅಡ್ಡಿ ಸ್ವಯಂಪ್ರೇರಿತ ಪ್ರಕರಣ:
ಈ ಘಟನೆಗೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಬಂದ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಅವರು ಮತ್ತು ಸಿಬಂದಿಗಳು ಸಾರ್ವಜನಿಕವಾಗಿ ಗಲಾಟೆ ಮಾಡುತ್ತಿದ್ದ ಗುಂಪನ್ನು ಚದುರಿಸುವ ವೇಳೆ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿ ನಿಯಾಝ್, ನೌಶಾದ್ ಹಾಗೂ ಇತರರ ವಿರುದ್ಧ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಗಲಾಟೆಗೆ ಸಂಬಂಧಿಸಿ ಪುತ್ತೂರು ಚಿಕ್ಕಪುತ್ತೂರು ನಿವಾಸಿ ಮಹಮ್ಮದ್ ನೌಶಾದ್ (30) ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಪ್ರಸ್ತುತ ನೌಶಾದ್ ನನ್ನು ದಸ್ತಗಿರಿ ಮಾಡಿಲ್ಲ. ವೀಡಿಯೋ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.