ವೃದ್ದರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, 48 ಗಂಟೆ ಗಡುವು: ಜಿಲ್ಲೆಯಾದ್ಯಂತ ಹೋರಾಟ ಹಿಜಾವೇ ಎಚ್ಚರಿಕೆ
ಪುತ್ತೂರು: ದರ್ಭೆಯಲ್ಲಿ ನಡೆದ ಘಟನೆಯಲ್ಲಿ ವಯೋವೃದ್ಧ ಮತ್ತು ಮಹಿಳೆಯ ಮೇಲೆ ಮುಸ್ಲಿಂ ಯುವಕ ಕೈ ಮಾಡಿದ್ದು, ಈ ಆರೋಪಿಯನ್ನು 48 ಗಂಟೆಯೊಳಗೆ ಪೊಲೀಸರು ಬಂಧಿಸದಿದ್ದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಹಿಜಾವೇ ಪುತ್ತೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಯಾನಂದ ಅಂಬುಲ ಎಚ್ಚರಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯು ಪೂರ್ವನಿಯೋಜಿತವಾಗಿದ್ದು, ಘಟನೆ ನಡೆದ ತಕ್ಷಣ ಕಬಕ, ಪುರುಷರಕಟ್ಟೆ ಮತ್ತಿತರ ಕಡೆಗಳಿಂದ ಮತಾಂಧ ವ್ಯಕ್ತಿಗಳು ಸೇರಿಕೊಂಡು ಅಂಜನಾ ಪೈ ಮತ್ತು ಸದಾಶಿವ ಪೈ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪುತ್ತೂರು ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಈ ಸಂದರ್ಭದಲ್ಲಿ ಸಕಾಲಿಕವಾಗಿ ಪೊಲೀಸರು ಆಗಮಿಸದಿದ್ದಲ್ಲಿ ದುರ್ಘಟನೆ ಸಂಭವಿಸುತ್ತಿತ್ತು ಎಂದರು.
ಹಿಂದೂಗಳ ಮೇಲೆ ದಾಳಿ ನಡೆದಾಗ ಸರ್ಕಾರದ ಸೂಚನೆಯಂತೆ ಇಲಾಖೆಗಳು ಮಲತಾಯಿಧೋರಣೆ ತಾಳುವ ಮೂಲಕ ಹಿಂದುಗಳನ್ನು ಧಮನಿಸುವ ಕೆಲಸ ನಡೆಯುತ್ತಿದೆ. ಮತಾಂಧ ವ್ಯಕ್ತಿಗಳು ಕಾನೂನುನನ್ನು ಕೈಗೆತ್ತಿಕೊಂಡಾಗ ಏನೂ ಮಾಡದ ಪೊಲೀಸ್ ಇಲಾಖೆ ಸುದರ್ಶನ ಪೈ ವಿರುದ್ಧ ಕೇಸು ದಾಖಲಿಸಿದ್ದಾರೆ. ಹಿಂದೂಗಳು ಮಾಡಿದಲ್ಲಿ ನೈತಿಕ ಪೋಲೀಸ್ ಗಿರಿ ಎಂದು ಹೇಳಿ ಬಂಧಿಸುವ ಪೊಲೀಸರು ಅದನ್ನೇ ಮುಸ್ಲಿಂ ಯುವಕರು ಮಾಡಿದ್ದಲ್ಲಿ ಸಣ್ಣಪುಟ್ಟ ಕೇಸು ದಾಖಲಿಸುತ್ತಿದ್ದಾರೆ. ಸುದರ್ಶನ ಪೈ ಮೇಲೆ ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಹಲ್ಲೆಯಿಂದ ಅಂಜನಾ ಪೈ ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದರು.
ಹಿಂಜಾವೇ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಪ್ರಸಾದ್ ಶಾಂತಿಗೋಡು, ಪುತ್ತೂರು ತಾಲೂಕು ಸಂಯೋಜಕ ಕೀರ್ತನ್ ಸವಣೂರು, ಸಹ ಸಂಯೋಜಕ ಸುಭಾಸ್ ಮುಕ್ವೆ, ಸಹ ಸಂಚಾಲಕ ದಿನೇಶ್ ಪಂಜಿಗ ಉಪಸ್ಥಿತರಿದ್ದರು.