ಸಂತ ಫಿಲೋಮಿನಾ ಕಾಲೇಜಿನಲ್ಲಿ 80ನೇ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
Saturday, August 15, 2026
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ವಿವಿಧ ಅಭಿವೃದ್ಧಿಗಳನ್ನು ನಾವು ಕಾಣಬಹುದು. ಶಿಕ್ಷಣದ ಮಟ್ಟದಲ್ಲೂ ಅಭಿವೃದ್ಧಿಯನ್ನು ನಾವು ಕಾಣಬಹುದು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯಲು ಸಾಕ್ಷರತೆಯು ಹೆಚ್ಚುತ್ತಿದೆ. ನಮ್ಮಿಂದಲೇ ಪ್ರಾರಂಭಿಸೋಣ, ನಮ್ಮ ಸಮಾಜದಲ್ಲಿ ಏನೇನು ಮಾಡಬೇಕು ಮತ್ತು ಉತ್ತಮ ರಾಷ್ಟ್ರವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ನೋಡೋಣ ಎಂದು ಹೇಳಿದರು.
ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ. ಸ್ವಾತಂತ್ರ್ಯ ದಿನಾಚರಣೆಯ ಕುರಿತು ಸಂದೇಶವನ್ನು ನೀಡಿ, ಯಂತ್ರಗಳು ಮನುಷ್ಯರಿಗಿಂತ ಅತ್ಯಂತ ವೇಗವಾಗಿ ಯೋಚಿಸಬಲ್ಲವು, ಬರೆಯಬಲ್ಲವು ಆದರೆ ನೆನಪಿಡಿ ಯಂತ್ರಗಳಿಗೆ ಬುದ್ಧಿವಂತಿಕೆ ಇರಬಹುದು ಆದರೆ ವಿವೇಕ ಇರುವುದಿಲ್ಲ, ದೇಶವನ್ನು ಕಟ್ಟಲು ಡಿಗ್ರಿ ಸರ್ಟಿಫಿಕೇಟ್ ಬಳಿಸಿದರೆ ಸಾಲದು ಪುಸ್ತಕದಂತಹ ದೈಹಿಕ ಮತ್ತು ಮಾನಸಿಕ ಶಕ್ತಿಬೇಕು. ದೈನಂದಿನ ಜೀವನದಲ್ಲಿ ಕ್ರೀಡೆ, ಯೋಗ, ವ್ಯಾಯಾಮ ಹಾಗೂ ಸಕರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ, ಸೋಲುಗಳಿಗೆ ಹೆದರಬೇಡಿ ಎಂದು ಹೇಳಿದರು.
ಸಂತ ಫಿಲೋಮಿನಾ ಪದವಿ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಡಾ. ಆಂಟೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ದೈವಿಕ ಕೃಪೆ, ಪವಿತ್ರತೆ ಮತ್ತು ಸಮೃದ್ಧಿ ಈ ಮೂರು ಪದಗಳನ್ನು ನಾವು ಯಾವಾಗಲು ನೆನಪಿನಲ್ಲಿಡಬೇಕು. ನಾವೆಲ್ಲರೂ ಪವಿತ್ರವಾಗಿರುವ ಮೂಲಕ ಮತ್ತು ಸಮೃದ್ಧಿಯನ್ನು ಹೊಂದುವ ಮೂಲಕ ದೇವರ ಕೃಪೆಯನ್ನು ಅರಿತು, ನಮ್ಮ ದೇಶವನ್ನು ಅಭಿವೃದ್ಧಿಪಡಿಸೋಣ ಎಂದು ಹಾರೈಸಿದರು.
ಫಾದರ್ ಪತ್ರಾವೋ ಆಸ್ಪತ್ರೆಯ ಕೌಂಸೆಲ್ಲೆರ್ ಆದ ಚಂದನ್ ಸಿ. ಅಂಚನ್ ಅವರು ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ನೆರವೇರಿಸಿದರು.
3/19 ಕರ್ನಾಟಕ ಬೆಟಾಲಿಯನ್ ಎನ್ಸಿಸಿ, 5 ಕರ್ನಾಟಕ ನೇವಲ್ ಎನ್ಸಿಸಿ ಯೂನಿಟ್, ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ರೋವರ್ಸ್ ಅಂಡ್ ರೇಂಜರ್ಸ್, ಯೂತ್ ರೆಡ್ ಕ್ರಾಸ್ ಹಾಗೂ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಬ್ಯಾಂಡ್ ಟ್ರೂಪ್ ಭಾಗವಹಿಸಿದರು. ದಿಗಂತ್ ವಿ.ಎಸ್. ಪೆರೇಡ್ನ ನೇತೃತ್ವ ವಹಿಸಿದರು.
ಎನ್ಸಿಸಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೆರಾ, ಸಬ್ ಲೆಫ್ಟಿನೆಂಟ್ ತೇಜಸ್ವಿ, ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಎಸ್. ಡಿ’ಸೋಜಾ, ಶೈಕ್ಷಣಿಕಾ ಕುಲಸಚಿವ ಡಾ. ನೋರ್ಬಟ್ ಮಸ್ಕರೇನ್ಹಸ್, ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಲಲಿತ ಕಲಾ ಸಂಘದ ಸಂಚಾಲಕ ಪ್ರಶಾಂತ್ ರೈ ಹಾಗೂ ಪಿಆರ್ಒ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಸ್ವಾತಂತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ. ಡಿಂಪಲ್ ಫೆರ್ನಾಂಡಿಸ್ ವಂದಿಸಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಪಕಿ ಪೂಜಾಶ್ರೀ ವಿ. ರೈ ಕಾರ್ಯಕ್ರಮವನ್ನು ನಿರೂಪಿಸಿದರು.






