ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ: ಅಧ್ಯಕ್ಷರಾಗಿ ಲಿಖಿತ್ ಜೆ.ಡಿ., ಕಾರ್ಯದರ್ಶಿಯಾಗಿ ಜಯಕೃಷ್ಣ ಇ. ಜೊತೆ ಕಾರ್ಯದರ್ಶಿಯಾಗಿ ಎಂ. ನಿಶ್ಮಿತಾ ರೈ ಆಯ್ಕೆ
ಚುನಾವಣಾ ಪ್ರಕ್ರಿಯೆಯ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಸಂಘದ ವಿವಿಧ ಪದಾಧಿಕಾರಿ ಹುದ್ದೆಗಳಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಗೆಲುವು ಅಥವಾ ಸೋಲನ್ನು ಲೆಕ್ಕಿಸದೆ, ಸಂಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವ ದೃಷ್ಟಿಕೋನದೊಂದಿಗೆ ತಮ್ಮ ಜವಾಬ್ದಾರಿಗಳನ್ನು ಸಮರ್ಪಣೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ನಾಯಕತ್ವವೆಂದರೆ ಅಧಿಕಾರ ಚಲಾಯಿಸುವುದಲ್ಲ, ಬದಲಾಗಿ ಸೇವೆ, ಸಹಕಾರ ಹಾಗೂ ಸಹಪಾಠಿಗಳಿಗೆ ಮಾದರಿಯಾಗುವುದಾಗಿದೆ ಎಂದ ಅವರು ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಹ ಎಲ್ಲರನ್ನೂ ಒಳಗೊಂಡ, ಚೈತನ್ಯಮಯ ಕ್ಯಾಂಪಸ್ ವಾತಾವರಣ ನಿರ್ಮಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ III ಬಿ.ಕಾಂ. ವಿದ್ಯಾರ್ಥಿ ಮಹಮ್ಮದ್ ಇಬ್ರಾಹಿಂ ರಾಝ್ ಹಾಗೂ III ಬಿಬಿಎ ವಿದ್ಯಾರ್ಥಿ ಲಿಖಿತ್ ಜೆ.ಡಿ. ಸ್ಪರ್ಧಿಸಿದ್ದರು.
ಕಾರ್ಯದರ್ಶಿ ಹುದ್ದೆಗೆ III ಬಿಬಿಎಯ ಪ್ರಿಯಾ ಎಂ.ಕೆ., III ಬಿಸಿಎಯ ಹಸನ್ ಅಮ್ರಾ ಶಿಹಾಬುದ್ದೀನ್ ಹಾಗೂ III ಬಿ.ಕಾಂ.ನ ಜಯಕೃಷ್ಣ ಇ. ಸ್ಪರ್ಧಿಸಿದ್ದರು.
ಜೊತೆ ಕಾರ್ಯದರ್ಶಿ ಹುದ್ದೆಗೆ III ಬಿಎಸ್ಸಿ (BZC) ವಿದ್ಯಾರ್ಥಿನಿ ದಿಲ್ಶಾನಾ ಕೆ.ಎಸ್. ಹಾಗೂ III ಬಿಎಸ್ಸಿ (PMCs) ವಿದ್ಯಾರ್ಥಿನಿ ಎಂ. ನಿಶ್ಮಿತಾ ರೈ ಸ್ಪರ್ಧಿಸಿದ್ದರು.
ಪ್ರತಿಯೊಬ್ಬ ಅಭ್ಯರ್ಥಿಗೂ ಮತದಾರರನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಪರಿಷತ್ತಿನ ಕುರಿತು ತಮ್ಮ ದೃಷ್ಟಿಕೋನ, ಆದ್ಯತೆಗಳು ಹಾಗೂ ಬದ್ಧತೆಯನ್ನು ವಿವರಿಸಲು ಅವಕಾಶ ಕಲ್ಪಿಸಲಾಯಿತು. ಅಭ್ಯರ್ಥಿಗಳ ಭಾಷಣದ ಬಳಿಕ ವಿದ್ಯಾರ್ಥಿ ಸಮೂಹವು ತಮ್ಮ ಮತಗಳನ್ನು ಚಲಾಯಿಸಿತು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರ ಸಮಗ್ರ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಯಿತು. ಡಾ. ರಾಧಾಕೃಷ್ಣ ಗೌಡ ಮತ್ತು ಶ್ರೀಮತಿ ಸ್ಪಿಯರ್ಲ್ ಫಿಯೋನಾ ಪೆರೇರಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು., ಉಪ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಕುಲಸಚಿವ (ಪರೀಕ್ಷಾಂಗ) ಡಾ. ವಿನಯಚಂದ್ರ, ಮತಪತ್ರಗಳ ಉಸ್ತುವಾರಿ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೆ. ಚಂದ್ರಶೇಖರ್, ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಡಿಸೋಜಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಾಸುದೇವ ಎನ್. ಅವರು ಚುನಾವಣಾ ರಿಟರ್ನಿಂಗ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಮತ ಎಣಿಕೆ ಕಾರ್ಯದ ಉಸ್ತುವಾರಿಯನ್ನು ಶೈಕ್ಷಣಿಕ ವಿಭಾಗದ ಕುಲಸಚಿವ ಡಾ. ನಾರ್ಬರ್ಟ್ ಮಸ್ಕರೇನಸ್, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಭಾರತಿ ಎಸ್. ರೈ ವಹಿಸಿದ್ದರು. ಮತ ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲಾಯಿತು.
ಮತ ಎಣಿಕೆಯ ಬಳಿಕ III ಬಿಬಿಎ ವಿದ್ಯಾರ್ಥಿ ಲಿಖಿತ್ ಜೆ.ಡಿ. ಅವರು ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿ, III ಬಿ.ಕಾಂ. ವಿದ್ಯಾರ್ಥಿ ಜಯಕೃಷ್ಣ ಇ. ಅವರು ಕಾರ್ಯದರ್ಶಿಯಾಗಿ ಹಾಗೂ III ಬಿಎಸ್ಸಿ (PMCs) ವಿದ್ಯಾರ್ಥಿನಿ ಎಂ. ನಿಶ್ಮಿತಾ ರೈ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಅಭಿನಂದಿಸಿ ಸನ್ಮಾನಿಸಿದರು. ನೂತನ ಪದಾಧಿಕಾರಿಗಳಿಗೆ ಯಶಸ್ವಿ ಹಾಗೂ ಪರಿಣಾಮಕಾರಿ ಅವಧಿಗಾಗಿ ಶುಭ ಹಾರೈಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಕಾಲೇಜಿನ ಗೌರವಾನ್ವಿತ ಬೋಧಕ ವರ್ಗದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಹಕರಿಸಿದರು.