ನಾಳಿನ ಪುತ್ತೂರು ಶಾಂತಿ ಸೌಹಾರ್ದ ಚಲೋ ಮುಂದೂಡಿಕೆ
ಪುತ್ತೂರು: ದಕ್ಷಿಣಕನ್ನಡ ಯುವಜನ ಪರಿಷತ್ ವತಿಯಿಂದ ಪುತ್ತೂರಿನಲ್ಲಿ ಶಾಂತಿ, ಸೌಹಾರ್ಧತೆ ಹಾಗೂ ಸಹಬಾಳ್ವೆಯನ್ನು ಉಳಿಸುವ ನಿಟ್ಟಿನಲ್ಲಿ ಆ.31ರಂದು ನಡೆಸಲು ಉದ್ದೇಶಿಸಿದ್ದ ಪುತ್ತೂರು ಶಾಂತಿ ಸೌಹಾರ್ದ ಚಲೋ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.
ಸಂವಿಧಾನ ಮತ್ತು ಕಾನೂನನ್ನು ಗೌರವಿಸುವ ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಚರ್ಚೆ ನಡೆಸಲಾಗಿದ್ದು, ಆದಿನ ಇತರ ಕಾರ್ಯಕ್ರಮಗಳ ಆಯೋಜನೆಯಾಗಿದೆ. ಹಾಗಾಗಿ ಅಗತ್ಯ ಪೊಲೀಸ್ ಬಂದೋಬಸ್ತು ಒದಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಂಡು ಕಾನೂನುಬದ್ಧವಾಗಿ ಹಾಗೂ ಶಾಂತಿಯುತವಾಗಿ ಈ ಕಾರ್ಯಕ್ರಮ ನಡೆಯಲಿದೆ. ಶಾಂತಿ ನಮ್ಮ ಉದ್ದೇಶ. ಕಾನೂನು ಪಾಲನೆ ನಮ್ಮ ಬದ್ಧತೆ ಎಂಬ ನೆಲೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ಯಾವುದೇ ಗೊಂದಲ, ಉದ್ವಿಗ್ನತೆಗೆ ಒಳಗಾಗದೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ವಾತಾವರಣ ಸೃಷ್ಟಿಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ವಿನಂತಿಸಿದ್ದಾರೆ.