ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಗಾರ
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಂಶುಪಾಲ ಹಾಗೂ ರಾಷ್ಟ್ರೀಯ ತರಬೇತುದಾರ ಸೀತಾರಾಮ ಕೇವಳ ಮಾತನಾಡಿ, ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಲಾ ವಿಭಾಗದಲ್ಲಿ ಅಡಗಿರುವ ಸೃಜನಶೀಲತೆ, ಸ್ವಂತಿಕೆ ಹಾಗೂ ಪ್ರತಿಭೆಯ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಲಾ ವಿಭಾಗವು ವೈವಿಧ್ಯಮಯ ವೃತ್ತಿ ಮಾರ್ಗಗಳನ್ನು ಹಾಗೂ ವ್ಯಾಪಕವಾದ ವೃತ್ತಿಪರ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಮಾನವ ನಡವಳಿಕೆಯ ಅಧ್ಯಯನವು ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಅವರ ನಡವಳಿಕೆಯು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಅರಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಲಾ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಉತ್ತಮ ಸಂವಹನ ಕೌಶಲ್ಯ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಸಂಶೋಧನಾ ಕೌಶಲ್ಯ ಹಾಗೂ ಸೃಜನಾತ್ಮಕ ಚಿಂತನೆಯಂತಹ ಅಗತ್ಯ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಕಲಾ ವಿಭಾಗದ ಮಹತ್ವವನ್ನು ತಿಳಿಸಿ, ಕಲಾ ವಿಭಾಗವು ವಿದ್ಯಾರ್ಥಿಗಳಿಗೆ ವೈವಿದ್ಯಮಯ ಅವಕಾಶಗಳನ್ನು ನೀಡುತ್ತದೆ. ಈ ಅವಕಾಶಗಳನ್ನು ಬಳಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕೊಡುಗೆಯನ್ನು ನೀಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕಿ ಡಾ. ಹರಿಣಾಕ್ಷಿ ಎಂ. ಹಾಗೂ ಕಾಲೇಜಿನ ಮಾನವಿಕ ಸಂಘದ ನಿರ್ದೇಶಕರಾದ ಗೀತಾ ಕುಮಾರಿ ಮತ್ತು ಸಂದೇಶ್ ಜಾನ್ ಲೋಬೋ, ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ನಿಶ್ಚಿತ್ ಸ್ವಾಗತಿಸಿ, ಅನನ್ಯ ಅತಿಥಿಗಳನ್ನು ಪರಿಚಯಿಸಿ, ಧೃತಿ ಕಾರ್ಯಕ್ರಮ ನಿರೂಪಿಸಿ, ಶಾನ್ ವಂದಿಸಿದರು.