ಅಟೋ ಚಾಲಕನ ಪ್ರಾಮಾಣಿಕತೆ: ಚಿನ್ನವಿದ್ದ ಪರ್ಸು ವಾರಸುದಾರರಿಗೆ
Sunday, August 30, 2026
ಪುತ್ತೂರು: ರಿಕ್ಷಾ ಚಾಲಕರೊಬ್ಬರು ದಾರಿಯಲ್ಲಿ ಬಿದ್ದು ಸಿಕ್ಕಿದ್ದ ಪರ್ಸನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮರಿಕೆ ನಿವಾಸಿ ಮಹಮ್ಮದ್ ಅಶ್ರಫ್ ಅವರೇ ಪ್ರಾಮಾಣಿಕತೆ ಮೆರೆದ ಅಟೋಚಾಲಕ. ಒಳಮೊಗ್ರು ಗ್ರಾಮದ ಕುಂಬ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಪರ್ಸು ಬಿದ್ದು ಸಿಕ್ಕಿತ್ತು. ಅದರೊಳಗೆ 3 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಆಧಾರ್ ಕಾರ್ಡು ಕೂಡಾ ಇದ್ದು, ಅದರಲ್ಲಿದ್ದ ಮೊಬೈಲ್ ನಂಬರಿಗೆ ಅಶ್ರಫ್ ಕರೆಮಾಡಿದ್ದರು.
ಈ ಹಿನ್ನಲೆಯಲ್ಲಿ ಪರ್ಸಿನ ವಾರಸುದಾರ ಕೈಕಾರದ ಪಾಂಡಿತ್ತಡ್ಕ ನಿವಾಸಿ ದಿವಾಕರ ಆಚಾರ್ಯ ಎಂಬುವುದು ಪತ್ತೆಯಾಗಿತ್ತು. ದಿವಾಕರ ಆಚಾರ್ಯ ಅವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪರ್ಸು ಬಿದ್ದು ಹೋಗಿತ್ತು. ನಂತರ ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಸುಷ್ಮಾ ಭಂಡಾರಿ ಅವರ ಸಮಕ್ಷಮದಲ್ಲಿ ಅಶ್ರಫ್ ಅವರು ಪರ್ಸು ಹಾಗೂ ಅದರಲ್ಲಿ ವಸ್ತುಗಳನ್ನು ದಿವಾಕರ ಆಚಾರ್ಯ ಅವರಿಗೆ ಹಸ್ತಾಂತರಿಸಿದರು. ಅಟೋಚಾಲಕ ಮಹಮ್ಮದ್ ಅಶ್ರಫ್ ಅವರ ಪ್ರಾಮಾಣಿಕತೆಗೆ ಪಿಎಸ್ಐ ಸುಷ್ಮಭಂಡಾರಿ ಸಹಿತ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.