ಸರಕಾರಗಳ ದ್ವಂದ ನಿಲುವು, ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿಕರ ಬದುಕು ಶೋಚನೀಯ: ಸತ್ಯನಾರಾಯಣ
Monday, August 31, 2026
ಉಜಿರೆ: ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಆದೇಶದಂತೆ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ 1576 ಗ್ರಾಮಗಳ ಪರಿಶೀಲನೆಗೆ ಶಿಪಾರಸ್ಸು ಮಾಡಲಾಗಿದ್ದು, ಇದರಲ್ಲಿ ಉಡುಪಿ ಜಿಲ್ಲೆ 35 ಹಾಗೂ ದ.ಕ. ಜಿಲ್ಲೆ 7 ಗ್ರಾಮಗಳನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳೆಂದು ಶಿಪಾರಸ್ಸು ಮಾಡಿದ್ದು, ಈ ಭಾಗದ ಅನೇಕ ಕುಟುಂಬ ಕಂಗಾಲಾಗಿದ್ದಾರೆ. ಜೊತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾಗಿ ಆದಾಯ ಇಲ್ಲದಂತಾಗಿದೆ ಇದರಿಂದ ಕೃಷಿಕರ ಬದುಕು ಶೋಚನೀಯವಾಗಿದೆ ಎಂದು ಭಾರತೀಯ ಕಿಸಾನ್ ಸಂಘ ಮಂಗಳೂರು ವಿಭಾಗದ ಅರ್ಧಯಕ್ಷ ಎಂ.ಜಿ. ಸತ್ಯನಾರಾಯಣ ಹೇಳಿದರು.
ಅವರು ಸೋಮವಾರ ಭಾರತೀಯ ಕಿಸಾನ್ ಸಂಘ ವತಿಯಿಂದ ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಶತಮಾನಗಳಿಂದ ವಂಶ ಪಾರಂಪರಿಕವಾಗಿ ಕೃಷಿಯನ್ನೇ ಅವಲಂಬಿತವಾಗಿ ಸಂಸಾರ ಸಮೇತರಾದ ರೈತ ವರ್ಗದವರು ಸೂಕ್ತ ಕಂದಾಯ ದಾಖಲೆಗಳನ್ನು ಹೊಂದಿದ್ದು, ಸರಿಯಾಗಿ ಭೂಕಂದಾಯ, ಇತರ ತೆರಿಗೆಗಳನ್ನು ಪಾವತಿಸುವ ಪ್ರಾಮಾಣಿಕ ವರ್ಗದವರು. ಕಸ್ತೂರಿರಂಗನ್ ಜಾರಿ ಗೊಂದಲದಿಂದ ಇದೀಗ ದಿಕ್ಕು ಕಾಣದಾಗಿದೆ. ಕಸ್ತೂರಿರಂಗನ್ ಅವರ 2014 ರ ವರದಿ ಪುನರ್ ಪರಿಶೀಲನೆ ಮಾಡುವ ತನಕ ಜಾರಿಗೊಳಿಸಬಾರದು, ಕಾಡುಪ್ರಾಣಿಗಳ ಹಾವಳಿಯಿಂದ ರಕ್ಷಣೆ ಇಲ್ಲದಾಗಿದೆ. ಕೋವಿ ಪರವಾನಗಿ ನಡೆಯುತ್ತಿಲ್ಲ. ಇದಕ್ಕೆಲ್ಲ ಸಂಭಂದ ಪಟ್ಟ ಸರಕಾರ, ಇಲಾಖೆಗಳು ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಿಸಾನ್ ಸಂಘದ ಪ್ರಮುಖರಾದ ಅಂಬುಜಾಕ್ಷ, ರಾಮ ಪ್ರಸಾದ್, ಶಾಂಭವಿ, ಎಸ್.ಆರ್. ಭಾಸ್ಕರ್ ಸಾಲಿಯಾನ್, ಜಯಣ್ಣ, ಶಿವಣ್ಣ, ಜಯಸಾಲಿಯಾನ್ ಬದಿನಡೆ, ಸುರೇಶ್ ಶೆಟ್ಟಿ ಕುರೇಲ್ಯ, ರಮಾನಾಥ ಶೆಟ್ಟಿ ಪಂಬಾಜೆ, ಕರುಣಾಕರ ಶೆಟ್ಟಿ ನಾಲ್ಕೂರು, ಬಾಲಕೃಷ್ಣ ಶೆಟ್ಟಿ ಸವಣಾಲು, ರಾಜೇಂದ್ರ ಶೆಟ್ಟಿ ಕುರೇಲ್ಯ, ಜಗನ್ನಾಥ ಶಿರ್ಲಾಲ್, ಕುಶಾಲಪ್ಪ ಗೌಡ ಶಿರ್ಲಾಲ್, ಶಿವಾನಂದ ಹೆಗ್ಡೆ ಕರಂಬಾರು ಇನ್ನಿತರ ಮುಖಂಡರು ಭಾಗವಹಿಸಿದ್ದರು.
ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಮೆರವಣಿಗೆ ಬಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಸಂಭಂದ ಪಟ್ಟ ಇಲಾಖೆಗೆ ಮನವಿ ನೀಡಿದರು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಮಾಡಲಾಗುವುದೆಂದರು. ಭಾಸ್ಕರ್ ಸಾಲಿಯಾನ್ ವಂದಿಸಿದರು.
