ಬಸ್ಸಿನಲ್ಲಿ ಎದೆನೋವಿನಿಂದ ಕುಸಿದು ಬಿದ್ದ ವ್ಯಕ್ತಿಯ ಜೀವ ಉಳಿಸಿದ ಸಹಪ್ರಯಾಣಿಕರು
ಬಂಟ್ವಾಳ: ಕೆಎಸ್ಆರ್ಟಿಸಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದ ಪ್ರಯಾಣಿಕನಿಗೆ ಸಹಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ಪ್ರಥಮ ಚಿಕಿತ್ಸೆಯನ್ನಿತ್ತು, ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಜೀವ ಉಳಿಸಲು ನೆರವಾದ ವಿದ್ಯಮಾನ ಸಂಭವಿಸಿದೆ.
ಕುಕ್ಕಾಜೆ ನಿವಾಸಿ ರಹೀಮ್ ಕುಕ್ಕಾಜೆ ಎಂಬವರು ಶನಿವಾರ ಸಂಜೆ ಮೆಲ್ಕಾರ್ನಿಂದ ಸ್ಟೇಟ್ ಬ್ಯಾಂಕ್-ಪುತ್ತೂರು ಮಾರ್ಗದ ಕೆಎಸ್ಆರ್ಟಿಸಿ ಬಸ್ ಹತ್ತಿದ್ದು,
ಅನತಿ ದೂರ ಸಾಗುತ್ತಿದ್ದಂತೆ ರಹಿಮ್ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದರೆನ್ನಲಾಗಿದೆ.
ಆಗ ಅದೇ ಬಸ್ಸಿನಲ್ಲಿದ್ದ ಯೇನೆಪೋಯ ವಿಶ್ವವಿದ್ಯಾಲಯದ ಉದ್ಯೋಗಿ ಜಗದೀಶ್ ಬೆಳ್ಳಾರೆ ಅವರು ರಹಿಮ್ ಅವರ ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ನೆರವಿಗೆ ಬಂದರು. ಆಗ ಸಹಪ್ರಯಾಣಿಕರು ಮತ್ತು ಬಸ್ಸಿನಲ್ಲಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ನೆರವಿನೊಂದಿಗೆ ರಹಿಮ್ ಅವರಿಗೆ ಆಸ್ಪತ್ರೆಗೆ ತಲುಪುವವರೆಗೂ ರಹೀಮ್ ಅವರಿಗೆ ಸಿಪಿಆರ್ ನೀಡಿದರು.
ಈ ಸಂದರ್ಭ ಬಸ್ ಚಾಲಕ, ನಿರ್ವಾಹಕರು ಕೂಡ ತಡಮಾಡದೆ ಬಸ್ಸನ್ನು ಕಲ್ಲಡ್ಕದ ಖಾಸಗಿ ಆಸತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಗೆ ನೀಡುತ್ತಿದ್ದಂತೆ ಯೇನೆಪೋಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾಲಚಂದ್ರ ಭಟ್ ಅವರು ಕೂಡ ಆಸ್ಪತ್ರೆಗಾಗಮಿಸಿ ಅಗತ್ಯ ವೈದ್ಯಕೀಯ ನೆರವು ಒದಗಿಸುವಲ್ಲಿ ಸಹಕರಿಸಿದರು.
ತುರ್ತು ಸಂದರ್ಭದಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಮಾನವೀಯತೆ ಮೆರೆದ ಜಗದೀಶ್ ಬೆಳ್ಳಾರೆ, ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ಕೆಎಸ್ಆರ್ಟಿಸಿ ಬಸ್ ಚಾಲಕ,ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಸಹಪ್ರಯಾಣಿಕರ ಸಹಕಾರ ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ.