ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಮೃತ್ಯು
Monday, August 3, 2026
ಉಳ್ಳಾಲ: ಜಿಒಎಸ್ ಆಫ್ (ಗ್ರೂಫ್ ಆಪರೇಟೆಡ್ ಸ್ವಿಚ್) ಮಾಡದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಮೆಸ್ಕಾಂ ಲೈನ್ ಮೆನ್ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಣ ಎಂಬಲ್ಲಿ ಆ.3 ರಂದು ಬೆಳಗ್ಗೆ ನಡೆದಿದೆ.
ಅಂಬಿಕಾರೋಡ್, ಪಿಲಾರುವಿನ ನಿವಾಸಿ ಶೇಖ್ ಝಮೀರ್ (49) ಮೃತ ಪಟ್ಟ ವ್ಯಕ್ತಿ.
ಅವರು ಮೆಸ್ಕಾಮ್ ಕಂಪೆನಿಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಉಚ್ಚಿಲ ನಯಾಪಟ್ಣದ ಟ್ರಾನ್ಸ್ ಪಾರ್ಮರ್ನಲ್ಲಿ ವಿದ್ಯುತ್ ದೋಷದ ಬಗ್ಗೆ ಮೆಸ್ಕಾಂಗೆ ದೂರು ಬಂದಿದ್ದು, ಈ ಹಿನ್ನಲೆಯಲ್ಲಿ ಶೇಖ್ ಝಮೀರ್ ಹಾಗೂ ಸಹೋದ್ಯೋಗಿ ಸಂಗಪ್ಪ ಎಂಬವರು ಇಂದು ಬೆಳಗ್ಗೆ ಸ್ಥಳಕ್ಕೆ ದುರಸ್ಥಿಗೆ ಹೋಗಿದ್ದರು.
ಈ ವೇಳೆ ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಝಮೀರ್ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಝಮೀರ್ರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.