ಸಾರ್ವಜನಿಕವಾಗಿ ತಲವಾರು ಝಳಪಿಸಿ ದಾಂಧಲೆ ಆರೋಪ: ಇಬ್ಬರ ಬಂಧನ
Monday, August 10, 2026
ಉಳ್ಳಾಲ: ತೊಕ್ಕೊಟ್ಟು ಬಳಿ ಶನಿವಾರ ತಡರಾತ್ರಿ ಸಾರ್ವಜನಿಕವಾಗಿ ತಲವಾರು ಝಳಪಿಸಿ ಜನರನ್ನು ಬೆದರಿಸಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾರ್ಗತಲೆ ನಿವಾಸಿ ರೌಡಿಶೀಟರ್ ಮುಹಮ್ಮದ್ ಶಾಕಿರ್ ಹಾಗೂ ಆಟೋ ರಿಕ್ಷಾ ಚಾಲಕ ಮಂಚಿಲ ನಿವಾಸಿ ಅಶ್ನಾಕ್ ಎಂದು ಗುರುತಿಸಲಾಗಿದೆ. ಇವರು ಘಟನಾ ಸ್ಥಳಕ್ಕೆ ಆಗಮಿಸಿದ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಶನಿವಾರ ರಾತ್ರಿ ಆಟೋ ರಿಕ್ಷಾದಲ್ಲಿ ತೊಕ್ಕೊಟ್ಟಿಗೆ ಆಗಮಿಸಿ ಬಾರ್ ಎದುರುಗಡೆ ತಲವಾರು ಬೀಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾರೆ. ಘಟನೆಯ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.