ಕೋಟೆಪುರ ಸಮುದ್ರತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಉಳ್ಳಾಲ: ಕೋಟೆಪುರ ಅಳಿವೆಬಾಗಿಲು ಸಮುದ್ರ ತೀರದಲ್ಲಿ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಆ.9 ರಂದು ಬೋಟಿನಲ್ಲಿ ಮೀನುಗಾರಿಕೆಗೆ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆಗೆ ಸಿಲುಕಿ ಸಮುದ್ರಪಾಲಾಗಿ ನಾಪತ್ತೆಯಾದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಅನ್ನುವ ಶಂಕೆ ವ್ಯಕ್ತವಾಗಿದೆ.
ಆ.9 ರಂದು ಉಳ್ಳಾಲ ಮೂಲದ ಓಷಿಯನ್ ಸ್ಟಾರ್ ಹೆಸರಿನ ಬೋಟ್ ಮಂಗಳೂರಿನ ಧಕ್ಕೆಯಿಂದ ಮೀನುಗಾರಿಕೆಗೆ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆ ದೋಣಿಗೆ ಬಡಿದು ಕುಂದಾಪುರ ನಿವಾಸಿ ನಾರಾಯಣ (31) ಎಂಬವರು ಸಮುದ್ರದ ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದರು. ಈ ಕುರಿತು ಕಳೆದ 8 ದಿನಗಳಿಂದ ಬೋಟ್ ಮಾಲೀಕರು ಸೇರಿದಂತೆ, ಮನೆಮಂದಿ ಹುಡುಕಾಡುತ್ತಲೇ ಇದ್ದರು.
ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು .ಇದೀಗ ಉಳ್ಳಾಲದ ಕೋಟೆಪುರ ಅಳಿವೆಬಾಗಿಲು ಸಮೀಪ ಪತ್ತೆಯಾದ ಮೃತದೇಹ ಅವರದ್ದೇ ಆಗಿರುವ ಶಂಕೆ ವ್ಯಕ್ತವಾಗಿದ್ದು, ಶವಮಹಜರಿನ ಬಳಿಕವಷ್ಟೇ ತಿಳಿದುಬರಬೇಕಿದೆ. ಉಳ್ಳಾಲ ಪೊಲೀಸರು ಕೊಳೆತ ಸ್ಥಿತಿಯಲ್ಲಿರುವ ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.