ನಿವೃತ್ತ ಮುಖ್ಯೋಪಾಧ್ಯಾಯರ ಸ್ವಂತ ಖರ್ಚಿನಲ್ಲಿ ಚರಂಡಿ ಹೂಳೆತ್ತಿಸಿದರು!
ನಿವೃತ್ತ ಶಿಕ್ಷಕ ಬಿ.ಸಿ. ರೋಡಿನ ಕೈಕುಂಜ ನಿವಾಸಿ ಬಿ.ರಾಮಚಂದ್ರ ರಾವ್ ಅವರು ಸ್ವಂತ ಖರ್ಚಿನಲ್ಲಿ ತಮ್ಮ ಮನೆ ಎದುರು ಇದ್ದ ಚರಂಡಿಯನ್ನು ಹೂಳೆತ್ತುವ ಮೂಲಕ ಪುರಸಭೆ ಮಾಡಬೇಕಾದ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದಾರೆ.
ಮಳೆಗಾಲಕ್ಕೆ ಮುನ್ನವೇ ಚರಂಡಿ ಹೂಳೆತ್ತಿ ಮಳೆನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಪುರಸಭೆ ಮಾಡಬೇಕಾಗಿತ್ತು. ಆದರೆ ಅದ್ಯಾಕೋ ಈ ಬಾರಿ ಪುರಸಭಾ ವ್ಯಾಪ್ತಿಯ ಹಲವೆಡೆ ಚರಂಡಿಯ ಹೊಳೆತ್ತವ ಕಾರ್ಯ ನಡೆಸದ ಹಿನ್ನಲೆಯಲ್ಲಿ ಬಹುತೇಕ ಕಡೆ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯಲ್ಲೆ ಹರಿದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು.ಆದರೂ ಪುರಸಭೆ ಈ ನಿಟ್ಟಿನಲ್ಲಿ ಮೌನ ವಹಿಸಿತ್ತು.
ಮಳೆಗಾಲದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ ಪರಿಸರದ ರೈಲ್ವೆ ಸ್ಟೇಶನ್ನಿಂದ ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರಸ್ತೆಯ ರಸ್ತೆ ಬದಿಯ ತೋಡಿನಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿತ್ತು. ಇದರಿಂದಾಗಿ ಮಳೆನೀರು ಹರಿಯಲು ದಾರಿಯಿಲ್ಲದೆ, ಸ್ಥಳೀಯ ರಸ್ತೆಗೆ ಕೆಸರು ನುಗ್ಗಿತ್ತು.
ಸಮಸ್ಯೆಯ ಕುರಿತು ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ. ರಾಮಚಂದ್ರ ರಾವ್ ಸ್ಥಳೀಯರೊಂದಿಗೆ ಸೇರಿ ಸ್ಥಳೀಯ ಪುರಸಭೆಯ ನಿಕಟಪೂರ್ವ ಸದಸ್ಯರಿಗೂ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ಮನವಿಗಳನ್ನು ಸಲ್ಲಿಸಿದ್ದರೂ ಸ್ಪಂದನೆ ದೊರಕದೇ ಇದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಕೊನೆಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ತೋಡಿನ ಹೂಳೆತ್ತುವ ಕಾರ್ಯವನ್ನು ನಿರ್ವಹಿಸಿ,ಪುರಸಭೆಯ ಅಧಿಕಾರಿಗಳ ಕಣ್ಣು ತೆರೆಸಿದ್ದಾರೆ.
ಕಳೆದವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಬೆಳೆದಿದ್ದ ಹುಲ್ಲು, ಪೊದೆಯನ್ನು ತೆರವುಗೊಳಿಸಿದ್ದರು.