ಹದಗೆಟ್ಟ ಮೂಡುಬಿದಿರೆ-ಬಂಟ್ವಾಳ ರಾಜ್ಯ ಹೆದ್ದಾರಿ: ಘನ ವಾಹನ ಸಂಚಾರ ನಿರ್ಬಂಧಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು
ಈ ರಸ್ತೆಯಲ್ಲಿ ನಿರಂತರವಾಗಿ 10 ಚಕ್ರಗಳಿಗಿಂತ ಹೆಚ್ಚಿನ ಘನವಾಹನಗಳು, ಸಾಮರ್ಥ್ಯಕ್ಕೆ ಮೀರಿದ ಭಾರ ಹೊತ್ತ ವಾಹನಗಳ ಓಡಾಟದಿಂದ ರಸ್ತೆ ಹದಗೆಡಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪರಿಣಾಮ ಕಾರು, ರಿಕ್ಷಾ ಹಾಗೂ ಇತರ ಲಘು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ಈ ಹದಗೆಟ್ಟ ರಸ್ತೆಯಲ್ಲಿ ಅಪಾಯಕಾರಿಯಾಗಿ ಓವರ್ಟೇಕಿಂಗ್ ಹಾಗೂ ಸರಿಯಾದ ಸೂಚನೆ ನೀಡದೆ ವಾಹನ ಸಂಚರಿಸುವುದರಿಂದ ಅಪಘಾತಗಳ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಘನ ವಾಹನಗಳ ಓಡಾಟದಿಂದ ಪಲ್ಗುಣಿ ನದಿಯ ಸೇತುವೆ ಹಾಗೂ ಇಲ್ಲಿರುವ ಕಿರು ಸೇತುವೆಗಳು ಹಾನಿಯಾಗಿ ಅಪಾಯದ ಸ್ಥಿತಿಗೆ ತಲುಪಿದೆ ಎಂದು ದೂರಲಾಗಿದೆ.
ಪೊಲೀಸ್ ಠಾಣೆಗೆ ದೂರು:
ಮೂಡಬಿದ್ರೆ-ಬಂಟ್ವಾಳ ಲೋಕೋಪಯೋಗಿ ರಸ್ತೆಯಲ್ಲಿ ಭಾರೀ ವಾಹನಗಳ ನಿರಂತರ ಸಂಚಾರದಿಂದ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾದ ಪರಿಣಾಮ ಸಂಚಾರಕ್ಕೆ ಆಯೋಗ್ಯವಾಗಿದೆ. ಕಳಪೆ ಕಾಮಗಾರಿಯಿಂದಲೂ ರಸ್ತೆ ಹದಗೆಟ್ಟಿರು ವ ಅನುಮಾನಗಳಿದ್ದು,ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಕಾಮಗಾರಿ ನಿರ್ವಹಿಸಿದವರು ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಮುಖಂಡರನ್ನೊಳಗೊಂಡ ನಿಯೋಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.
ಅದೇ ರೀತಿ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ,ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು ದೂರಿನಲ್ಲಿ ಆಗ್ರಹಿಸಲಾಗಿದೆ. ಇದಕ್ಕು ಮೊದಲು ಈ ರಸ್ತೆಯಲ್ಲಿ ಸಂಚರಿಸಿದ ಲಾರಿ ಸಹಿತ ಘನವಾಹನಗಳನ್ನು ಕೊಯಿಲ ಶ್ರೀ ಗುರುಗಣೇಶ ಭಜನಾ ಮಂಡಳಿ ನೇತೃತ್ವದಲ್ಲಿ ತಡೆದು, ಬಳಿಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.
ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಜಗದೀಶ್ ಕೊಯಿಲ, ರಶ್ಮಿತ್ ಶೆಟ್ಟಿ, ಸಂತೋಷ್ ರಾಯಿ ಬೆಟ್ಟು ಹಾಗೂ ಕೊಯಿಲ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.
ದೂರಿನಲ್ಲಿ ಏನೇನಿದೆ:
* ರಸ್ತೆ ಸ್ಥಿತಿಗೆ ಬರುವವರೆಗೆ ಈ ರಸ್ತೆಯಲ್ಲಿ ಅತಿಭಾರದ ಹಾಗೂ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ರಸ್ತೆ ಮೂಲಕ ವ್ಯವಸ್ಥೆ ಕಲ್ಪಿಸಬೇಕು.
* ಬಂಟ್ವಾಳ-ಮೂಡುಬಿದಿರೆ ರಸ್ತೆಯನ್ನು ಆದಷ್ಟು ಶೀಘ್ರವಾಗಿ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು.
* ರಸ್ತೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಅನುಮಾನಗಳಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.