ಅ.1ರಿಂದ ಮಂಗಳೂರು ರೈಲ್ವೆ ವ್ಯಾಪ್ತಿ ಮೈಸೂರು ವಿಭಾಗಕ್ಕೆ
ವಿಭಾಗೀಯ ವ್ಯಾಪ್ತಿ ಬದಲಾವಣೆಯ ಸಂದರ್ಭದಲ್ಲಿ ರೈಲು ಸೇವೆ ಹಾಗೂ ಕಾರ್ಯಾಚರಣೆಗಳಿಗೆ ಯಾವುದೇ ವ್ಯತ್ಯಯ ಉಂಟಾಗದಂತೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಬದಲಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಎರಡೂ ವಿಭಾಗಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ನಿರ್ಧರಿಸಿವೆ.
ರೈಲು ಕಾರ್ಯಾಚರಣೆಯ ಸಮನ್ವಯ, ಆಸ್ತಿಗಳು, ದಾಖಲೆಗಳು, ನಿಯಂತ್ರಣ ವ್ಯವಸ್ಥೆಗಳು, ಸಿಬ್ಬಂದಿ ಸೇರಿದಂತೆ ವಿಭಾಗೀಯ ವ್ಯಾಪ್ತಿ ಬದಲಾವಣೆಯಿಂದ ಉಂಟಾಗುವ ವಿವಿಧ ಆಡಳಿತಾತ್ಮಕ ಹಾಗೂ ಕಾರ್ಯಾಚರಣಾ ವಿಚಾರಗಳ ಕುರಿತು ಅಧಿಕಾರಿಗಳು ಚರ್ಚಿಸಿದರು.
ಮಂಗಳೂರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲಿ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆಗೆ ಸೇರ್ಪಡೆಯಾಗಲು ಆಯ್ಕೆ ನೀಡಲಾಗುತ್ತದೆ. ರೈಲ್ವೆ ಮಂಡಳಿ ನಿಗದಿಪಡಿಸಿರುವ ನಿಯಮಗಳು ಮತ್ತು ಪ್ರಕ್ರಿಯೆಯಂತೆ ಸಿಬ್ಬಂದಿ ವರ್ಗಾವಣೆ ನಡೆಯಲಿದೆ.
ರಾಜಪತ್ರೇತರ ಸಿಬ್ಬಂದಿಯನ್ನು ‘ಇದ್ದಲ್ಲಿಯೇ ಇರುವ ಆಧಾರದ ಮೇಲೆ’ ವರ್ಗಾಯಿಸಲು ರೈಲ್ವೆ ಮಂಡಳಿ ನಿರ್ದೇಶನ ನೀಡಿದ್ದು, ದಕ್ಷಿಣ ರೈಲ್ವೆಯಲ್ಲಿ ಉಳಿಯುವ ಅಥವಾ ನೈಋತ್ಯ ರೈಲ್ವೆಗೆ ಸೇರುವ ಆಯ್ಕೆಯನ್ನು ಸಿಬ್ಬಂದಿಗೆ ನೀಡಲಾಗಿದೆ. ಇತರ ವರ್ಗದ ಸಿಬ್ಬಂದಿಗೆ ಅನ್ವಯಿಸುವ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.
ಮಂಗಳೂರು ಪ್ರದೇಶದ ವಿಭಾಗೀಯ ವ್ಯಾಪ್ತಿ ಬದಲಾವಣೆ ಅ.1, 2026ರಿಂದ ಜಾರಿಗೆ ಬರಲಿದೆ. ರೈಲು ಸಂಚಾರ ಮತ್ತು ಪ್ರಯಾಣಿಕರ ಸೇವೆಗಳು ಎಂದಿನಂತೆ ಮುಂದುವರಿಯುವಂತೆ ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಪಾಲಕ್ಕಾಡ್ ಮತ್ತು ಮೈಸೂರು ವಿಭಾಗಗಳು ವಿಶ್ವಾಸ ವ್ಯಕ್ತಪಡಿಸಿವೆ.