ಹೂವಿನ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಜನರ ಆಚರಣೆಯ ಹಕ್ಕಿನ ಮೇಲಿನ ಧಾಳಿ: ಬಿ.ಕೆ. ಇಮ್ತಿಯಾಜ್
ಮಂಗಳೂರು: ಕೃಷ್ಣಾಷ್ಟಮಿ, ಸೇರಿದಂತೆ ಹಬ್ಬದ ವಿಶೇಷ ದಿನಗಳಲ್ಲಿ ನಗರಕ್ಕೆ ಹೊರ ಜಿಲ್ಲೆಗಳಿಂದ ವ್ಯಾಪಾರಕ್ಕೆ ಬರುವ ರೈತರು ಮತ್ತು ಹೂ ವ್ಯಾಪಾರಿಗಳನ್ನು ಇಂದು ಕೆಲವು ಸ್ಥಾಪಿತ ಹಿತಾಸಕ್ತಿಗಳ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಧಾಳಿ ನಡೆಸಿರುವುದು ಖಂಡನಾರ್ಹ ಕ್ರಮ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ತಿಳಿಸಿದ್ದಾರೆ.
ಪಾಲಿಕೆಯ ಕಾರ್ಯಾಚರಣೆ ವಿರೋಧಿಸಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಹಬ್ಬದ ಸಂಧರ್ಭದಲ್ಲಿ ಹಾಸನ ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ತರುವ ಹೂವುಗಳನ್ನು ಪೂಜೆಗೆ ಬಳಸಲಾಗುತ್ತಿದೆ ರೈತರೇ ನೇರ ಮಾರಾಟಕ್ಕೆ ಬರುವುದರಿಂದ ಜನರಿಗೂ ಕಡಿಮೆ ಬೆಲೆಗೆ ಹೂವು ಖರೀದಿಸುತ್ತಾರೆ
ಪಾಲಿಕೆ ಆಯುಕ್ತರು ನಿರ್ದಿಷ್ಟ ಕೆಲವು ವ್ಯಕ್ತಿಗಳು ನೀಡುವ ದೂರಿಗೆ ಮಾತ್ರ ತಕ್ಷಣ ಪ್ರತಿಕ್ರಿಯಿಸುತ್ತಾರೆ ಹಬ್ಬದ ದಿನಗಳಲ್ಲೂ ಯೋಚಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ದುಡುಕುತ್ತಿರುವುದು ಖಂಡನೀಯವಾಗಿದೆ.
ಹಬ್ಬದ ವಿಶೇಷ ಸಂಧರ್ಭದಲ್ಲಿ ಹೂವು ಅಥವಾ ಪೂಜಾ ಸಾಮಗ್ರಿಗಳ ಮಾರಾಟದಲ್ಲಿ ಕೇವಲ ವ್ಯಾಪಾರ ಹಿತಾಸಕ್ತಿಯನ್ನು ಗುರಿಯಾಗಿಸಿಕೊಂಡು ಜನರ ಭಾವನೆ ಮತ್ತು ಆಚರಣೆ ಹಕ್ಕನ್ನು ಹತ್ತಿಕ್ಕುತ್ತಿದೆ.
ಸಂಡೆ ಬಜಾರ್ ವ್ಯಾಪಾರವನ್ನು ವಿರೋಧಿಸುವ ಮನಸ್ಥಿತಿಯ ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೂವಿನ ವ್ಯಾಪಾರಕ್ಕೂ ಆಕ್ಷೇಪ ವ್ಯಕ್ತಪಡಿಸಿ ಧಾಳಿ ನಡೆಸಲು ಪಾಲಿಕೆ ಅಧಿಕಾರಿಗಳನ್ನು ಪ್ರೆರೇಪಿಸಿದ್ದಾರೆ ಇದು ಕಾಂಗ್ರೆಸ್ ಸರಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಮತ್ತೊಂದು ಪ್ರಯತ್ನ ಎಂದು ಬಿ.ಕೆ ಇಮ್ತಿಯಾಜ್ ಹೇಳಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಯಾಕೆ ಮೌನವಾಗಿದ್ದಾರೆ ಎಂದೂ ಅವರು ಪ್ರಶ್ನಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳ ಜೀವನ ಸಂರಕ್ಷಣೆ ಕಾಯಿದೆ 2014ರಲ್ಲಿ ವಾರದ ಸಂತೆ ವ್ಯಾಪಾರ, ಹಬ್ಬ, ಉತ್ಸವ, ಜಾತ್ರೆ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂಬ ನೀತಿ ಇದ್ದರೂ ಪಾಲಿಕೆ ಆಯುಕ್ತರು ಬೀದಿಬದಿ ವ್ಯಾಪಾರದ ತೆರವಿನ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಇದು ನಗರಪಾಲಿಕೆಯ ಬಡ ಜನ ವಿರೋಧಿ ನೀತಿಯನ್ನು ತೋರಿಸುತ್ತಿದೆ ಎಂದು ಹೇಳಿರುವ ಅವರು ಹಬ್ಬ, ಉತ್ಸವ, ಜಾತ್ರೆ ವ್ಯಾಪಾರಿಗಳ ಹಿತರಕ್ಷಣೆಗೆ ಪಾಲಿಕೆ ಬದ್ದವಾಗಿರದೆ ಕಾರ್ಯಾಚರಣೆ ನಡೆಸಿದರೆ ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಬಿ.ಕೆ ಇಮ್ತಿಯಾಜ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.