‘ತುಳುವಿಗೆ ತುಳು ವಿಕಿಪೀಡಿಯ ದೊಡ್ಡ ಶಕ್ತಿ’: ತಾರಾನಾಥ ಗಟ್ಟಿ
ಅವರು ಶನಿವಾರ ತುಳು ವಿಕಿಪೀಡಿಯ ಮತ್ತು ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಆಶ್ರಯದಲ್ಲಿ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ‘ತುಳು ವಿಕಿಪೀಡಿಯ ದಶ ಸಂಭ್ರಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಳುನಾಡಿನಲ್ಲಿ, ತುಳುವಿನಲ್ಲಿ ಅದೆಷ್ಟೋ ವಿಶೇಷತೆಗಳು ಇದ್ದರೂ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಇದ್ದುದರಿಂದ ತುಳು ಸೀಮಿತ ಪರಿಧಿಯಲ್ಲಿ ಉಳಿದಿದೆ. ಸೀಮಿತ ಪರಿದಿಯಿಂದ ಹೊರ ಬರಬೇಕು. ಬರಹ, ಹೊಸ ಹೊಸ ಶೋಧನೆಗಳ ಲೇಖನ, ಅಧ್ಯಯನ ಆಧಾರಿತ ಬರಹಗಳನ್ನು ಇಂದಿನ ಯುವಜನತೆ ಆಧುನಿಕತೆಗೆ ತಕ್ಕಂತೆ ಅಳವಡಿಸಿಕೊಂಡು ಹೊಸ ತಲೆಮಾರಿಗೆ ತುಳುವನ್ನು ಕಟ್ಟಿಕೊಡುವ ಕೆಲಸ ಮಾಡಬೇಕಿದೆ. ಇಂತಹ ಕೆಲಸಗಳು ತುಳು ವಿಕಿಪೀಡಿಯಾ ತಂಡದಿಂದ ಆಗುತ್ತಿರುವುದು ಉತ್ತಮ ಕೆಲಸ ಎಂದರು.
ವಿಕಿಪೀಡಿಯದಲ್ಲಿ ತೊಡಗಿಕೊಂಡಿರುವ ವಿಕಾಸ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ಶ್ರೀಮಂತ, ಹಳೆಯ ಭಾಷೆ. ತುಳು ಭಾಷೆ ಇನ್ನಷ್ಟು ಬೆಳೆಯಬೇಕಾದರೆ ಅದನ್ನು ಡಿಜಿಟಲ್ ಲೋಕದಲ್ಲಿ ವಿಸ್ತರಿಸಬೇಕು. ಇದಕ್ಕೆ ವಿಕಿಪೀಡಿಯ ವೇದಿಕೆ ನೀಡಲಿದೆ. ತುಳು ಭಾಷೆಯನ್ನು ಕೆಲವೇ ರಂಗಕ್ಕೆ ಸೀಮಿತಗೊಳಿಸದೇ ಡಿಜಿಟಲ್ ಫ್ಲ್ಯಾಟ್ಫಾರ್ಮ್ಗಳಲ್ಲಿ ಬಳಸಿಕೊಳ್ಳಬೇಕು. ಇದಕ್ಕೆ ಯುವಜನತೆ ಹೆಚ್ಚಿನ ವಿಚಾರಗಳನ್ನು, ಲೇಖನಗಳನ್ನು, ಸಮಯವನ್ನು ವ್ಯಯಿಸಬೇಕು. ತಮ್ಮಲ್ಲಿರುವ ತುಳುವಿನ, ತುಳುನಾಡಿನ ವಿಶೇಷತೆಗಳನ್ನು ವಿಕಿಪೀಡಿಯಾಗೆ ಸಲ್ಲಿಸಬೇಕು. ಈ ಮೂಲಕ ವಿಕಿಪಿಡಿಯದಲ್ಲಿ ತುಳು ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ತುಳು ವಿಕಿಪಿಡಿಯ ನಿರ್ವಾಹಕ ಡಾ.ಯು.ಬಿ.ಪವನಜ ಅವರು ‘ವಿಕಿಪಿಡಿಯ ಕೋಡೆ-ಇನಿ’ ವಿಷಯದ ಬಗ್ಗೆ ಮಾತನಾಡಿದರು.
ಮಲೆಯಾಳ ವಿಕಿಪೀಡಿಯಾದ ರಂಜಿತ್ ಸಜಿ, ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಅಧ್ಯಕ್ಷ ಡಾ.ವಿಶ್ವನಾಥ ಬದಿಕಾನ ಮತ್ತಿತರರು ಇದ್ದರು.
ತುಳು ವಿಕಿಪೀಡಿಯ ದಶ ಸಂಭ್ರಮ ಸಂಘಟಕ ಕಿಶೋರ್ ಕುಮಾರ್ ಸ್ವಾಗತಿಸಿದರು. ತುಳು ವಿಕಿಪೀಡಿಯ ನಿರ್ವಾಹಕ ಭರತೇಶ ಅಲಸಂಡೆಮಜಲು ವಂದಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮಹಾಲಿಂಗ ಭಟ್ ನಿರೂಪಿಸಿದರು.