ಕಸ್ತೂರಿ ರಂಗನ್ ವರದಿ: ಶೀಘ್ರವೇ ಬಾಧಿತರ ಸಭೆ

ಕಸ್ತೂರಿ ರಂಗನ್ ವರದಿ: ಶೀಘ್ರವೇ ಬಾಧಿತರ ಸಭೆ


ಮಂಗಳೂರು: ಕಸ್ತೂರಿ ರಂಗನ್ ಸರ್ವೇ ವರದಿ ಕುರಿತು ಚರ್ಚಿಸಲು ಸೆ. 21ರಿಂದ 23ರ ವರೆಗೆ ಬೆಂಗಳೂರಿನಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಉಭಯ ಜಿಲ್ಲೆಯಲ್ಲಿ ಈ ವರದಿಯಿಂದ ಬಾಧಿತರಾಗುವವರ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ಸರಿ ಇಲ್ಲದ ಹಿನ್ನೆಲೆಯಲ್ಲಿ 8 ಬಾರಿ ರಾಜ್ಯ ಸರಕಾರ ತಿರಸ್ಕರಿಸಿದರೂ, ಇದನ್ನು ಜಾರಿಗೆ ತರಲೇಬೇಕೆಂದು ಕೇಂದ್ರ ಸರಕಾರ ಪದೇ ಪದೇ ಒತ್ತಡ ಹೇರುತ್ತಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ನೋಡುವಾಗ ರಾಜ್ಯಕ್ಕೆ ಇದೊಂದು ಸವಾಲಾಗಿದೆ. ಇದನ್ನು ಹೇಗೆ ಮೆಟ್ಟಿ ನಿಲ್ಲಬಹುದು ಎನ್ನುವ ಕುರಿತು ಚರ್ಚಿಸಲು ರಾಜ್ಯ ಸರಕಾರ ವಿಶೇಷ ಅಧಿವೇಶನ ಕರೆದಿದೆ. ಅಲ್ಲಿ ವರದಿಯ ನ್ಯೂನ್ಯತೆಗಳ ಬಗ್ಗೆ ಚರ್ಚಿಸಲಾಗುವುದು. ಅದಕ್ಕೂ ಮುನ್ನ ಬಾಧಿತ ಜನರ ಸಭೆ ನಡೆಸಿ ಚರ್ಚಿಸಲಾಗುವುದು. ಸ್ಥಳ ನಿಗದಿ ಇನ್ನಷ್ಟೇ ಮಾಡಬೇಕಿದೆ. 7 ಜಿಲ್ಲೆಗಳು ಕಸ್ತೂರಿ ರಂಗನ್ ವರದಿಯಿಂದ ಬಾಧಿತವಾಗುತ್ತದೆ. ಬಾಧಿತ ಜಿಲ್ಲೆಗಳ ಭಾಗದ ಬಿಜೆಪಿ ಸಂಸದರು ಕೇಂದ್ರಕ್ಕೆ ಮನವರಿಕೆ ಮಾಡಬೇಕಿದೆ. ಲೋಕಸಭೆಯಲ್ಲೂ ಚರ್ಚೆಯಾಗುವಂತಾಗಬೇಕು. ಪಶ್ಚಿಮ ಘಟ್ಟ ಪರಿಸರದೊಂದಿಗೆ ಜನರ ಬದುಕನ್ನೂ ನೋಡಬೇಕಿದೆ ಎಂದರು.

ಟಾಸ್ಕ್‌ಪೋರ್ಸ್..

ಮಂಗಳೂರಿನಲ್ಲಿ ಸೆ. 18ರಂದು ನಡೆಯುವ ಸಚಿವ ಸಂಪುಟ ಸಭೆ ಕರಾವಳಿಗರ ಮಟ್ಟಿಗೆ ಮಹತ್ವದ್ದಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಸಿಆರ್ಝಡ್ ಸರಳೀಕರಣ, ಸಿಂಗಲ್ ವಿಂಡೋ ಯೋಜನೆ, ಹೂಡಿಕೆದಾರರ ಆಕರ್ಷಣೆ, ಕೈಗಾರಿಕೆ ಜತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಕರಾವಳಿಯ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಟಾಸ್ಕ್‌ಪೋರ್ಸ್ ರಚಿಸಲು ಮನವಿ ಮಾಡಲಾಗಿದೆ ಎಂದು  ಹೇಳಿದರು. 

ಮುಖಂಡರಾದ ಸಲೀಂ ಅಹಮದ್, ಇಬ್ರಾಹಿಂ, ಹೊನ್ನಯ್ಯ, ಅಪ್ಪಿ, ಸುಹಾನ್ ಆಳ್ವ, ಸುಹಾಸ್, ನವೀನ್ ಡಿಸೋಜ, ಪ್ರಕಾಶ್ ಸಾಲಿಯಾನ್, ಇಮ್ರಾನ್ ಎ.ಆರ್., ಭಾಸ್ಕರ್ ರಾವ್, ಸತೀಶ್ ಬೆಂಗಲ್, ಮನುರಾಜ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article