ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ
ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್, ಬೆಂಗಳೂರು ಇದರ ರಜತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಬನಶಂಕರಿಯ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯ ಫಣಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಆರ್.ಎನ್.ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿಶಂಕರ್ ಬಿ.ವಿ. ಅವರು ಎಸ್. ಜಗದೀಶ್ಚಂದ್ರ ಅಂಚನ್ ಅವರಿಗೆ ಬೆಳ್ಳಿ ಹಾಗೂ ಚಿನ್ನದ ಪದಕದೊಂದಿಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಕ್ರೀಡಾ ಕ್ಷೇತ್ರದ ಬೆಳವಣಿಗೆ, ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡೆಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ತಮ್ಮ ಅಂಕಣ ಬರಹಗಳ ಮೂಲಕ ನಿರಂತರವಾಗಿ ದಾಖಲಿಸುತ್ತಿರುವ ಎಸ್. ಜಗದೀಶ್ಚಂದ್ರ ಅಂಚನ್ ಅವರ ಸೇವೆಯನ್ನು ಸಮಾರಂಭದಲ್ಲಿ ಶ್ಲಾಘಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ಆರ್.ಎನ್.ಎಸ್. ಕಾಲೇಜು ಹಾಗೂ ಮುಡಿಪುವಿನ ಜ್ಞಾನಶ್ರೀ ವಿದ್ಯಾಲಯದ ವತಿಯಿಂದಲೂ ಎಸ್. ಜಗದೀಶ್ಚಂದ್ರ ಅಂಚನ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಬಸವ ವೇದಿಕೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀ ವಚನ ಜ್ಯೋತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಾನಪ್ರಕಾಶ ಎನ್. ತಿಮ್ಮಪ್ಪ, ಬೆಂಗಳೂರು ಎಂ.ಎನ್.ಆರ್. ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹನ್ ಕುಮಾರ್ ಆರ್., ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ, ಜ್ಞಾನ ಮಂದಾರ ಟ್ರಸ್ಟ್ನ ಸಂಸ್ಥಾಪಕ ಸೋಮಶೇಖರ್, ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಎಂ.ಎಸ್. ಆರತಿ ಸುರೇಶ್, ಪ್ರೊ. ಕಾಂತಪ್ಪ, ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಹಾಗೂ ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು ಇದರ ಕಾರ್ಯದರ್ಶಿ ತಿಲಕ್ ರಾಜ್ ಎಸ್. ಮತ್ತಿತರರು ಉಪಸ್ಥಿತರಿದ್ದರು.