Mangalore: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ: ಡಿ.೩೧ ರಿಂದ ಅಧಿಕೃತ ಸಂಚಾರ ಆರಂಭ
ಮಂಗಳೂರು: ಮಂಗಳೂರು-ಮಡ್ಗಾಂವ್(ಗೋವಾ) ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಡಿ.೩೦ರಂದು ಬೆಳಗ್ಗೆ ೧೦ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಿಂದಲೇ
ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ
ತೋರಿಸಲಿದ್ದಾರೆ. ಈ ರೈಲು ಡಿ.೩೧ರಿಂದಲೇ ಅಧಿಕೃತ ಸಂಚಾರ ಆರಂಭಿಸುವ ಬಗ್ಗೆ ರೈಲ್ವೆ ಸಚಿವಾಲಯ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ವಂದೇ ಭಾರತ್ಗೆ ಚಾಲನೆ ನೀಡುವ ಸಂದರ್ಭ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ
ನಡೆಯುವ ಔಪಚಾರಿಕ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಸಂಸದ ನಳಿನ್ ಕುಮಾರ್
ಕಟೀಲ್, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ, ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಕುಮಾರ್, ಪ್ರತಾಪ್ಸಿಂಹ ನಾಯಕ್, ಬಿ.ಎಂ.ಫಾರೂಕ್, ಎಸ್.ಎಸ್.ಭೋಜೇ ಗೌಡ, ಮಂಜುನಾಥ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭಾಗವಹಿಸುವರು.
ಉದ್ಘಾಟನಾ ರೈಲು ಬೆಳಗ್ಗೆ ೧೧ ಗಂಟೆಗೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿದ್ದು, ಸುರತ್ಕಲ್, ಮೂಲ್ಕಿ ಮತ್ತಿತರ ನಿಲ್ದಾಣಗಳಲ್ಲಿ ಸ್ವಾಗತ ಸ್ವೀಕರಿಸಿಕೊಂಡು ಸಂಜೆ ವೇಳೆಗೆ ಮಡ್ಗಾಂವ್ ತಲುಪಲಿದೆ. ಈ ರೈಲಿನಲ್ಲಿ ಸಂಸದ ನಳಿನ್ ಕುಮಾರ್ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಪ್ರಯಾಣಿಸಲಿದ್ದಾರೆ. ಇದೇ ವೇಳೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ೪ ಮತ್ತು ೫ನೇ ಫ್ಲ್ಯಾಟ್ಫಾರಂ ಕೂಡ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಗುರುವಾರ ಹೊರತುಪಡಿಸಿ ೬ ದಿನ ಸಂಚಾರ:
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗುರುವಾರ ಹೊರತುಪಡಿಸಿ ವಾರದ ಆರು ದಿನ
ಮಂಗಳೂರು-ಮಡ್ಗಾಂವ್ ನಡುವೆ ಓಡಾಟ ನಡೆಸಲಿದೆ. ರೈಲು ನಂಬರ್ ೨೦೬೪೬ ಬೆಳಗ್ಗೆ ೮.೩೦ಕ್ಕೆ ಮಂಗಳೂರಿನಿಂದ ಹೊರಟು ೯.೪೮ ಉಡುಪಿ, ಮಧ್ಯಾಹ್ನ ೧೨.೦೮ ಕಾರವಾರ, ೧.೧೫ ಮಡ್ಗಾಂವ್ ತಲುಪಲಿದೆ. ಸುಮಾರು ೪.೪೫ ಗಂಟೆ ಸಂಚಾರ ಅವಧಿ ಇರಲಿದೆ. ಮಡ್ಗಾಂವ್ನಿಂದ ರೈಲು ಸಂಖ್ಯೆ ೨೦೬೪೫ ಸಂಜೆ ೬.೧೦ಕ್ಕೆ ಹೊರಟು ೬.೫೫ ಕಾರವಾರ, ರಾತ್ರಿ ೯.೧೨ ಉಡುಪಿ, ೧೦.೪೫ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ವೇಳೆ ೪.೩೫ ಗಂಟೆ ಸಂಚಾರ ಅವಧಿ ಇರುತ್ತದೆ. ಉಳಿದ ಎರಡು ನಿಲ್ದಾಣಗಳಲ್ಲಿ ತಲಾ ೨ ನಿಮಿಷ
ನಿಲುಗಡೆಯಾಗಲಿದೆ. ಈ ರೈಲು ಎಂಟು ಬೋಗಿಗಳನ್ನು ಒಳಗೊಂಡಿದೆ ಎಂದು ರೈಲ್ವೆ ಪ್ರಕಟಣೆ
ತಿಳಿಸಿದೆ.