Moodubidire: ಫೆ.6: ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2023-24

Moodubidire: ಫೆ.6: ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2023-24


ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಸಹಯೋಗದೊಂದಿಗೆ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2023-24 ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ಫೆಬ್ರವರಿ 6ರಂದು ಆಳ್ವಾಸ್ ವಿದ್ಯಾಗಿರಿಯ ಕೃಷಿಸಿರಿ ವೇದಿಕೆ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಬೆಳಗ್ಗೆ 8.45ರಂದು ಬೆಳಗ್ಗೆ 9 ಗಂಟೆಗೆ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿರುವರು. ಸಂಜೆ 5.30ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. 

ರಾಜ್ಯದ ಯಾವುದೇ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದ್ದು, ಇಲ್ಲಿನ ಸ್ಪರ್ಧೆಗಳಲ್ಲಿ 6ರಿಂದ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಏಕಕಾಲದಲ್ಲಿ ಪ್ರಾರಂಭವಾಗುವಂತೆ 8 ವೇದಿಕೆಗಳಲ್ಲಿ ಯಕ್ಷಗಾನ ಕಲೆಯಾಧಾರಿತ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪ್ರಸಕ್ತ ಸ್ಪರ್ಧೆಗಳಲ್ಲಿ 2000 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಯಕ್ಷರೂಪಕ ಸ್ಪರ್ಧೆಯಲ್ಲಿ ಯಕ್ಷಧ್ರುವ-ಯಕ್ಷ ಶಿಕ್ಷಣ ಯೋಜನೆಯಡಿ ಬರುವ ಶಾಲೆಯ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಪ್ರಸಕ್ತ ಸ್ಪರ್ಧೆಯಲ್ಲಿ ಒಂದೇ ದಿನ 38 ಶಾಲೆಗಳ 42 ತಂಡದ ಸುಮಾರು 1600 ವಿದ್ಯಾರ್ಥಿಗಳು ಯಕ್ಷಗಾನ ವೇಷಭೂಷಣ ಧರಿಸಿ ಯಕ್ಷರಂಗ ಪ್ರವೇಶ ಮಾಡಲಿದ್ದಾರೆ.

ಕೃಷಿಸಿರಿ ವೇದಿಕೆ ಆವರಣದ ಮುಂಡ್ರದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿರುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆ ಮುಖ್ಯವೇದಿಕೆಯಾಗಿದ್ದು ಕಾರ್ಯಕ್ರಮದ ಉದ್ಘಾಟನೆ, ಸಮಾರೋಪ ಸಮಾರಂಭ ಮತ್ತು ಯಕ್ಷ ರೂಪಕ ಸ್ಪರ್ಧೆ ಈ ವೇದಿಕೆಯಲ್ಲಿ ನಡೆಯಲಿದೆ.

ರಾಜ್ಯದ ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಪ್ರೊ. ಎಂ.ಎ. ಹೆಗಡೆ ವೇದಿಕೆಯಲ್ಲಿ (ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣ) ಯಕ್ಷರೂಪಕ ಸ್ಪರ್ಧೆ, ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ (ನುಡಿಸಿರಿ ವೇದಿಕೆ ಆವರಣ) ಯಕ್ಷ ಲೇಖನ ಸ್ಪರ್ಧೆ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ (ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ-ಪಿ.ಯಾ ಕಾಲೇಜಿನ ಒಳ ಆವರಣ) ಯಕ್ಷಜ್ಞಾನ ಪರೀಕ್ಷಾ ಪಂಥ, ದೇವಕಾನ ಕೃಷ್ಣಭಟ್ ವೇದಿಕೆಯಲ್ಲಿ (ನುಡಿಸಿರಿ ವೇದಿಕೆ ಆವರಣ) ಯಕ್ಷ ರಂಗು ಮುಖವರ್ಣಿಕೆ ಸ್ಪರ್ಧೆ, ಭಾಗವತ ಪ್ರಸಾದ ಬಲಿಪ ವೇದಿಕೆಯಲ್ಲಿ (ಕುವೆಂಪು ಸಭಾಂಗಣದ ಆವರಣ-ಆಳ್ವಾಸ್ ಡಿಗ್ರಿ ಕಾಲೇಜು) ಶ್ಲೋಕ ಕಂಠಪಾಠ ಸ್ಪರ್ಧೆ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆಯಲ್ಲಿ (ಡಾ. ವಿ.ಎಸ್ ಆಚಾರ್ಯ ಸಭಾಂಗಣ-ಆಳ್ವಾಸ್ ಕೆಪೆಟೇರಿಯಾ ಆವರಣ) ಯಾಕ್ಷ ರಸಪ್ರಶ್ನೆ ಸ್ಪರ್ಧೆ, ಮಲ್ಪೆ ವಾಸುದೇವ ಸಾಮಗ ವೇದಿಕೆಯಲ್ಲಿ (ಕಾಮರ್ಸ್ ಸೆಮಿನಾರ್ ಹಾಲ್- ಆಳ್ವಾಸ್ ಡಿಗ್ರಿ ಕಾಲೇಜು ಆವರಣ ಯಕ್ಷ ಸ್ವಗತ ಮಾತುಗಾರಿಕೆ ಸ್ಪರ್ಧೆ ನಡೆಯಲಿದೆ. 

ಯಕ್ಷರಂಗದ ವಿದ್ವಾಂಸರು ಪ್ರಸಕ್ತ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಯಕ್ಷ ಧ್ರುವ ವಿದ್ಯಾರ್ಥಿ ಸಮ್ಮಿಲನದ ಸಮಾರೋಪ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವೆಬ್ ಸ್ಟೆಟ್ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದರು. ಯಕ್ಷದ್ರುವ ಪಟ್ಲ ಫೌಂಡೇಶನ್ ಟಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷದ್ರುವ-ಯಕ್ಷಶಿಕ್ಷಣ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ್, ಟ್ರಸ್ಟ್‌ನ ಮೂಡುಬಿದಿರೆ ಘಟಕಾಧ್ಯಕ್ಷ ತೋಡಾರು ದಿವಾಕರ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ದೀವಿತ್ ಎಸ್.ಕೆ ಪೆರಾಡಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article