Bantwal: ಶಾಲಾ ಬಾಲಕನಿಗೆ ತಗುಲಿದ ಬೆಂಕಿ
ಬಂಟ್ವಾಳ: ಶಾಲಾ ಆವರಣದಲ್ಲಿ ಕಸವನ್ನು ಹೊತ್ತಿಸುವ ವೇಳೆ ಶಾಲಾ ವಿದ್ಯಾರ್ಥಿಯೋರ್ವನಿಗೆ ಬೆಂಕಿ ತಗುಲಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಶಂಭೂರು ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಯೊಂದರ 9ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿಗೆ ಬೆಂಕಿ ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಾಲಾ ಆವರಣದಲ್ಲಿ ಕಸವನ್ನು ರಾಶಿ ಹಾಕಿ ಅದಕ್ಕೆ ಬೆಂಕಿ ಕೊಡಲಾಗಿತ್ತು.
ಕಸ ಉರಿಯುತ್ತಿರುವ ವೇಳೆ ಪೆಟ್ರೋಲಿಯಂ ಉತ್ಪನ್ನವೊಂದನ್ನು ಬೆಂಕಿ ಉರಿಯುತ್ತಿರುವ ಕಸದ ರಾಶಿಗೆ ಹಾಕಿದ್ದು, ಆಗ ಒಮ್ಮೆಲೇ ಬೆಂಕಿಯ ಜ್ವಾಲೆ ವಿದ್ಯಾರ್ಥಿಯ ಮೈಮೇಲೆ ಹತ್ತಿಕೊಂಡಿದೆ. ಬೆಂಕಿಯ ತಗುಲಿದ ಪರಿಣಾಮವಾಗಿ ಉರಿಯಿಂದ ಬೊಬ್ಬೆ ಹಾಕಿಕೊಂಡು ಮನೆಗೆ ಓಡಿ ಹೋಗಿದ್ದ, ಈತನನ್ನು ಶಿಕ್ಷಕರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಬಳಿಕ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸರು ಗಾಯಾಳು ಬಾಲಕನ ಹೇಳಿಕೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಗೊತ್ತಾದರೂ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರು ಗಾಯಾಳು ಬಾಲಕನನ್ನಾಗಲಿ,ಅವರ ಮನೆಯವರನ್ನಾಗಲೀ, ಶಾಲೆಗೂ ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಮೀಟಿಂಗ್ನಲ್ಲಿ ಇರುವ ಕಾರಣ ಸ್ಕೂಲ್ಗೆ ಬೇಟಿ ನೀಡಲು ಸಾಧ್ಯವಾಗಿಲ್ಲ, ಶಾಲೆಗೆ ಬೇಟಿ ನೀಡಿ ಸ್ಪಷ್ಟವಾದ ಮಾಹಿತಿ ನೀಡುವುದಾಗಿ ಬಿ.ಇ.ಒ. ತಿಳಿಸಿದ್ದಾರೆ.