Bantwal: ಅಭ್ಯರ್ಥಿಯಾಗಿರಿವುದು ನನ್ನ ಸೌಭಾಗ್ಯ: ಕ್ಯಾ. ಬ್ರಿಜೇಶ್ ಚೌಟ
ಬಂಟ್ವಾಳ: ಪ್ರತಿಷ್ಠಿತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ನನ್ನ ಸೌಭಾಗ್ಯವಾಗಿದೆಯಲ್ಲದೆ ಸಂತಸವನ್ನು ತಂದಿದೆ. ನನಗೆ ಈ ಅವಕಾಶವನ್ನು ಒದಗಿಸಿದ ಪಕ್ಷದ ರಾಷ್ಟ್ರ, ರಾಜ್ಯ ವರಿಷ್ಠರಿಗೆ, ಜಿಲ್ಲಾಧ್ಯಕ್ಷರಿಗೆ, ಪಕ್ಷದ ಹಿರಿಯರು ಹಾಗು ಪ್ರಮುಖರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಶುಕ್ರವಾರ ಬಿ.ಸಿ. ರೋಡಿನಲ್ಲಿರುವ ಬಂಟ್ವಾಳ ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ಮಂಡಲದ ಪ್ರಮುಖರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯ ವಿವಿಧ ಹಂತದಲ್ಲಿ ಸಂಘಟನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಪಕ್ಷದ ಹಿರಿಯರ ಮತ್ತು ಯುವ ಕಾರ್ಯಕರ್ತರ ತ್ಯಾಗ,ಪರಿಶ್ರಮಗಳನ್ನು ಹತ್ತಿರದಿಂದ ಕಂಡಿದ್ದೇನೆ. 2047ರಲ್ಲಿ ದೇಶವು ವಿಕಸಿತ ವಿಶ್ವಗುರು ಭಾರತವಾಗಿ ಪರಿವರ್ತಿಸಲು ಸಂಕಲ್ಪ ತೊಟ್ಟಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಲ ನೀಡಲು ನಾನು ಕಟಿಬದ್ಧನಾಗಿದ್ದೇನೆ ಎಂದರು.
ತುಳುನಾಡಿನ ಪುಣ್ಯ ಭೂಮಿಯ ಧರ್ಮ, ರಕ್ಷಣೆ ಮತ್ತು ಅಭಿವೃದ್ಧಿ ನನ್ನ ಮುಂದಿನ ಗುರಿಯಾಗಿದ್ದು, ಕಾರ್ಯಕರ್ತರ ಕಷ್ಟ, ನೋವುಗಳಿಗೆ ಸ್ಪಂದಿಸುವವನಾಗಿ ಜೊತೆಯಲ್ಲಿರುತ್ತೇನೆ ಎಂದ ಅವರು ಬಂಟ್ವಾಳ ಕ್ಷೇತ್ರದ ಸವಾಲು, ಕಾರ್ಯಕರ್ತರ ಭಾವನೆಗಳ ಅರಿವು ನನಗಿದ್ದು,ಈ ಚುನಾವಣಾ ಮಹಾ ಸಮರದಲ್ಲಿ ನಾವೆಲ್ಲರು ಒಂದಾಗಿ ಪಕ್ಷದ ಅಭೂತಪೂರ್ವ ಗೆಲುವಿಗೆ ಶ್ರಮಿಸೋಣ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಮಾತನಾಡಿ, ಕ್ಯಾ. ಬ್ರಿಜೇಶ್ ಚೌಟರವರ ನಮಗೆ ಗೆಲುವು ನಿಶ್ಚಿತ. ಆದರೆ ಮೈಮರೆವು ಸಲ್ಲದು. ಗೆಲುವಿಗಾಗಿ ಕಾರ್ಯಕರ್ತರ ಪರಿಶ್ರಮ ದ್ವಿಗುಣಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಪ್ರವಾಸ ಮಾಡಿ, ಜನಜಾಗೃತಿಗೊಳಿಸುವ ಮೂಲಕ ನರೇಂದ್ರ ಮೋದಿಯವರನ್ನು ಮೂರನೇ ಭಾರಿ ಪ್ರಧಾನಿ ಮಾಡುವುದಕ್ಕಾಗಿ ಬ್ರಿಜೇಶ್ ಚೌಟರನ್ನು ಸಂಸದರಾಗಿ ಗೆಲ್ಲಿಸೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಯುವ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಬಿಜೆಪಿ ರಾಷ್ಟ್ರೀಯ ವರಿಷ್ಠರು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಕಳೆದ ಭಾರಿ ಬಂಟ್ಟಾಳದಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ 31000 ಮತಗಳ ಮುನ್ನಡೆ ನೀಡಲಾಗಿದ್ದು, ಈ ಚುನಾವಣೆಯಲ್ಲಿ 50000 ಮತಗಳ ಮುನ್ನಡೆಯೊಂದಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರಾದ ನಾವೆಲ್ಲ ಶ್ರಮಿಸೋಣ ಎಂದರು.
ಇದೇ ವೇಳೆ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಬ್ರಿಜೇಶ್ ಚೌಟರವರಿಗೆ ಶಾಲು ಹಾಕಿ ಅಭಿನಂದಿಸಲಾಯಿತು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಬಂಟ್ವಾಳ ಮಂಡಲ ಪ್ರಭಾರಿ ಪೂಜಾ ಪೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಹರಿಕೃಷ್ಣ ಬಂಟ್ವಾಳ, ರಾಜ್ಯ ನಾಯಕರಾದ ವಿಕಾಸ್ ಪುತ್ತೂರು, ಯುವ ಚಾಪಾಲ್ ಕಾರ್ಯಕ್ರಮದ ಜಿಲ್ಲಾ ಪ್ರಭಾರಿ ಸಂದೇಶ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಡೊಂಬಯ ಅರಳ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.