Mangalore: ಅರುಣ್ ಕುಮಾರ್ ಪುತ್ತಿಲ್ಲ ಅಧಿಕೃತವಾಗಿ ಬಿಜೆಪಿ ಸೇರ್ಪಡೆ
ಮಂಗಳೂರು: ಪುತ್ತಿಲ್ಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಅವರನ್ನು ಶನಿವಾರ ಸಂಜೆ ದ. ಕ. ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಪುತ್ತಿಲ ಅವರಿಗೆ ಪಕ್ಷದ ಶಾಲು ಹಾಕಿ, ಸದಸ್ಯತ್ವ ನೀಡಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಬರಮಾಡಿಕೊಂಡರು. ಪುತ್ತಿಲ ಪರಿವಾರದ ಮುಖಂಡರಾದ ಪ್ರಸನ್ನ ಮಾರ್ತಾ, ಉಮೇಶ್, ಅನಿಲ್ ಮತ್ತಿತರರನ್ನೂ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಜಿಲ್ಲಾ ಚುನಾವಣಾ ಉಸ್ತುವಾರಿ ನಿತಿನ್ ಕುಮಾರ್, ಜಿಲ್ಲಾ ಪ್ರಭಾರಿ ಪ್ರೇಮಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಸುದರ್ಶನ್, ಜಿಲ್ಲಾ ಪದಾಧಿಕಾರಿಗಳು,
ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ವಿದ್ಯಾಗೌರಿ ಮೊದಲಾದವರಿದ್ದರು.
ಸತೀಶ್ ಕುಂಪಲ, ಕೆಲವೊಂದು ವ್ಯತ್ಯಾಸಗಳು ನಡೆದಿರಬಹುದು. ಈಗ ಎಲ್ಲವನ್ನೂ ಸರಿಪಡಿಸಿಕೊಂಡು ಮುಂದುವರಿಯಲಾಗುತ್ತಿದೆ. ಏನೇ ಗೊಂದಲಗಳು ಇದ್ದರೂ ನಮ್ಮೊಳಗೇ ಪರಿಹರಿಸಿಕೊಳ್ಳಬೇಕು ಎಂದರು.
ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನ..:
ಬಿಜೆಪಿಗೆ ಸೇರ್ಪಡೆಯಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಲಾಗಿದೆ. ಲೋಕಸಭಾ ಚುನಾವಣೆಯ ಈ ಕಾಲಘಟ್ಟದಲ್ಲಿ ಇದೊಂದು ಒಳ್ಳೆಯ ಹೆಜ್ಜೆಯಾಗಿದೆ. ನರೇಂದ್ರ ಮೋದಿ ನೇತೃತ್ವ ದೇಶಕ್ಕೆ ಇನ್ನೂ 10 ವರ್ಷಗಳ ಕಾಲ ಇರಬೇಕು. ಈ ದಿಸೆಯಲ್ಲಿ ನಮ್ಮ ಎಲ್ಲ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಸಕ್ರಿಯರಾಗಿ ದುಡಿಯಬೇಕು. ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.
ಬೇಷರತ್ ಸೇರ್ಪಡೆ..:
ನಾನು ಆರ್ಎಸ್ಎಸ್ ಕಾರ್ಯಕರ್ತ. ಸಂಘಟನೆ ಹಾಗೂ ಪಕ್ಷಕ್ಕಾಗಿ ಕಳೆದ 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಯಾವುದೇ ಹುದ್ದೆಯ ಅಪೇಕ್ಷೆ ಇರಿಸಿ ಬಿಜೆಪಿ ಸೇರಿಲ್ಲ. ಪಕ್ಷ ಹಾಗೂ ಹಿರಿಯರ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ. ನನ್ನ ಎಲ್ಲ ಕಾರ್ಯಕರ್ತರೂ ಈ ಕ್ಷಣದಿಂದ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇನೆ ಎಂದರು.
ಮಂಗಳೂರಿಗೆ ನೂರಾರು ವಾಹನಗಳಲ್ಲಿ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಪಕ್ಷದ ಚುನಾವಣಾ ಕಚೇರಿ ಪ್ರವೇಶಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮಾಧ್ಯಮದವರ ಅಗತ್ಯ ಇಲ್ಲ...:
ಈ ಕುರಿತು ವರದಿ ಮಾಡಲು ಹೋದ ಮಾಧ್ಯಮದವರನ್ನು ತಳ್ಳಾಡಿ ಅನುಚಿತವಾಗಿ ವರ್ತಿಸಲಾಯಿತು. ಮಾಧ್ಯಮದವರು ಇಲ್ಲಿ ಬರುವುದು ಯಾಕೆ? ನಮಗೆ ಮಾಧ್ಯಮದವರ ಅವಶ್ಯಕತೆ ಇಲ್ಲ, ನಾವು ಒಂದಾಗಿ ಆಯಿತು ಎಂದು ಅಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದರು. ಪುತ್ತಿಲ್ಲ ಸೇರ್ಪಡೆ ಕುರಿತಂತೆ ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ. ಮಾಹಿತಿ ತಿಳಿದು ವರದಿಗಾಗಿ ಹೋದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಲಾಯಿತು.