Moodubidire: ಡಾ. ಪಿ.ಜಿ.ಬಿ. ಆಳ್ವ ನಿಧನ
ಮೂಡುಬಿದಿರೆ: ಹಿರಿಯ ದಂತವೈದ್ಯ ಡಾ. ಪೆರುವಾಯಿ ಗುತ್ತು ಬಾಲಕೃಷ್ಣ ಆಳ್ವ (72) ಅಲ್ಪಕಾಲದ ಅಸ್ವಾಸ್ಥ್ಯದಿಂದ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಮಾ ೩ರಂದು ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯ ಅರಿವಳಿಕೆ, ತೀವ್ರನಿಗಾ ತಜ್ಞ, ಮುಖ್ಯಸ್ಥ ಡಾ. ಅರ್ಜುನ್ ಆಳ್ವ ಸಹಿತ ಬಂಧು ವರ್ಗವನ್ನು ಅಗಲಿದ್ದಾರೆ.
ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯಲ್ಲಿ ದಂತವೈದ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದ ಅವರು ನಂತರ ತನ್ನದೇ ಕ್ಲಿನಿಕ್ ತೆರೆದು ಸುಮಾರು ನಾಲ್ಕು ದಶಕಗಳ ಕಾಲ ದಂತವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಮೂಡುಬಿದಿರೆಯ ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಸದಸ್ಯರಾಗಿ ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದರು. ನೇರ ನಡೆ-ನುಡಿಯ ಶಿಸ್ತಿನ ವ್ಯಕ್ತಿತ್ವದವರಾಗಿದ್ದ ಡಾ. ಆಳ್ವ ಉತ್ತಮ ಕ್ರೀಡಾಪಟುವೂ ಆಗಿದ್ದರು.
ಸೋಮವಾರ ಬೆಳಿಗ್ಗೆ ಪಾರ್ಥೀವ ಶರೀರವನ್ನು ಮೂಡುಬಿದಿರೆಗೆ ತರಲಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಮೋಹನ ಆಳ್ವ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷೆ ಡಾ. ರಶ್ಮಿ ಮುರಳೀಕೃಷ್ಣ, ಜಿ.ವಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಹರೀಶ್ ನಾಯಕ್, ರೋಟರಿ ಅಧ್ಯಕ್ಷ ನಾಗರಾಜ್, ಇನ್ನರ್ವೀಲ್ ಅಧ್ಯಕ್ಷೆ ಸರಿತಾ ಆಶೀರ್ವಾದ್ ಸಹಿತ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.