Mangalore: ಸೈಟ್ ಅಭಿವೃದ್ಧಿ ನೆಪದಲ್ಲಿ 86 ಲಕ್ಷ ವಂಚನೆ
ಮಂಗಳೂರು: ಸೈಟ್ ಅಭಿವೃದ್ಧಿ ಪಡಿಸುವ ನೆಪದಲ್ಲಿ ಬಿಲ್ಡರ್ ಒಬ್ಬರಿಂದ 86 ಲಕ್ಷ ರೂ. ಹಣ ಪಡೆದು ವಂಚಿಸಿ, ಲೇಔಟ್ ವ್ಯವಹಾರಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್ ಸಹಿತ ಬ್ರೋಕರ್, ಸಿವಿಲ್ ಗುತ್ತಿಗೆದಾರನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿರುವ ಜೆಪ್ಪಿನಮೊಗರು ನಿವಾಸಿ ಪವನ್ ಕುಮಾರ್, ಬ್ರೋಕರ್ ಆಗಿರುವ ಗುರುರಾಜ್, ಸಿವಿಲ್ ಗುತ್ತಿಗೆದಾರ ಜಗದೀಶ್ ಹಾಗೂ ಅವರ ಸಹಚರ ಜಯಪ್ರಕಾಶ್ ಜೆ.ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳ್ಳಾಲದ ಪುಷ್ಪರಾಜ್ ಎಂಬವರು ಬೆಂಗಳೂರು ಮೂಲದ ವೆಂಕಟೇಶ್ ಮತ್ತು ಮಹೇಶ್ ಕುಮಾರ್ ಎಂಬಿಬ್ಬರು ಬಿಲ್ಡರ್ ಗಳ ಜೊತೆಗೂಡಿ ಮಂಗಳೂರಿನಲ್ಲಿ ಲೇಔಟ್ ನಿರ್ಮಿಸಿ ಸಾರ್ವಜನಿಕವಾಗಿ ಸೈಟ್ ಮಾರಾಟ ಮಾಡಲು ಯೋಜನೆ ಹಾಕಿದ್ದರು. ಇದೇ ಸಂದರ್ಭ ಬ್ಯಾಂಕ್ ಮ್ಯಾನೇಜರ್ ಪವನ್ ಕುಮಾರ್ ಎಂಬಾತ ಪರಿಚಯವಾಗಿದ್ದು ತನ್ನ ಮೂಲಕ ಉಳ್ಳಾಲದಲ್ಲಿ ನಾಲ್ಕು ಎಕ್ರೆ ಜಮೀನನ್ನು ಕ್ರಯಕ್ಕೆ ಕೊಡಿಸಿದ್ದರು. 2022ರ ಫೆಬ್ರವರಿ ತಿಂಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಲು ಆರಂಭಿಸಿದ್ದರು. ಈ ಬಗ್ಗೆ ಪವನ್ ಕುಮಾರ್, ಬಿಲ್ಡರ್ ಅವರಲ್ಲಿ ಲೇಔಟ್ನ ಡ್ರೈನೇಜ್ ಇನ್ನಿತರ ಕೆಲಸಗಳನ್ನು ತಾನೇ ಮಾಡಿಸುತ್ತೇನೆಂದು ಹೇಳಿ ಮಾತುಕತೆ ನಡೆಸಿದ್ದರು. ಇದಕ್ಕಾಗಿ ಬಿಲ್ಡರ್ ಬಳಿಯಿಂದ ೮೬ ಲಕ್ಷ ರೂ. ಹಣವನ್ನು ಆರ್ ಟಿಜಿಎಸ್ ಮೂಲಕ ಹಣವನ್ನು ಪಡೆದಿದ್ದರು. ಆದರೆ, ಪವನ್ ಕುಮಾರ್ ಬಿಲ್ಡರ್ ಗಮನಕ್ಕೆ ಬರದಂತೆ ಅಲ್ಲಿನ ಕೆಲಸವನ್ನು ಜಗದೀಶ್ ಎಂಬವರಿಗೆ ಉಪಗುತ್ತಿಗೆ ಕೊಟ್ಟಿದ್ದರು. ಈ ನಡುವೆ, ಬಿಲ್ಡರ್ ಮತ್ತು ಪುಷ್ಪರಾಜ್ ಅವರು ಪರಿಶೀಲನೆ ನಡೆಸಿದಾಗ, ಕಾಮಗಾರಿ ಕಳಪೆಯಾಗಿ ಕಂಡುಬಂದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಉಪಗುತ್ತಿಗೆ ವಹಿಸಿಕೊಂಡಿದ್ದ ಜಗದೀಶ್ ಕೆಲಸವನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ್ದರು. ಆದ್ದರಿಂದ ಮತ್ತೆ ಕಾಮಗಾರಿಯನ್ನು ಬಿಲ್ಡರ್ ತಾನೇ ಮಾಡಿಸಿದ್ದರು.
ಈ ನಡುವೆ ಕಾಮಗಾರಿ ಹೆಸರಿನಲ್ಲಿ ಪಡೆದುಕೊಂಡ ಹಣವನ್ನು ವಾಪಸ್ ನೀಡುವಂತೆ ಪವನ್ ಕುಮಾರ್ ಬಳಿ ಬಿಲ್ಡರುಗಳು ಕೇಳಿದ್ದರು. ಇದರ ನೆಪದಲ್ಲಿ ಬಿಲ್ಡರ್ ಮೇಲೆ ಸೇಡಿನಿಂದ ದ್ವೇಷ ಸಾಧಿಸಲು ಮುಂದಾಗಿದ್ದ ಪವನ್ ಕುಮಾರ್ ತನ್ನ ಪಟಾಲಂ ಇಟ್ಟುಕೊಂಡು ಸೈಟುಗಳು ಮಾರಾಟವಾಗದಂತೆ ಅಪಪ್ರಚಾರ ಆರಂಭಿಸಿದ್ದರು. ಇದಲ್ಲದೆ, ಜ.11 ರಂದು ಮಧ್ಯಾಹ್ನ 3 ಗಂಟೆಗೆ ಪವನ್ ಕುಮಾರ್, ಬ್ರೋಕರುಗಳಾದ ಗುರುರಾಜ್, ಜಯಪ್ರಕಾಶ್ ಸೇರಿಕೊಂಡು ಲೇಔಟ್ಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ದಕ್ಷರಾಜ್, ರಾಧಾಕೃಷ್ಣ ಎಂಬವರನ್ನು ಎಳೆದಾಡಿ ಕಾಲಿನಿಂದ ತುಳಿದು ಹಲ್ಲೆ ನಡೆಸಿರುವುದಲ್ಲದೆ, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪುಷ್ಪರಾಜ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.