
Mangalore: ಸಾಮಾಜಿಕ ಕಳಕಳಿಯ ಜನಾನುರಾಗಿ ಉದ್ಯಮಿ ಸೀತಾರಾಮ ಭಟ್: ಎಸ್. ಪ್ರದೀಪ ಕುಮಾರ ಕಲ್ಕೂರ
Tuesday, May 7, 2024
ಮಂಗಳೂರು: ಹೊಟೇಲ್ ಉದ್ಯಮಿಯಾಗಿದ್ದುಕೊಂಡು, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಅಪಾರವಾದ ಕಳಕಳಿಯನ್ನು ಹೊಂದಿದ್ದ, ಸೀತಾರಾಮ್ ಭಟ್ ಅವರು ಅತ್ಯಂತ ಜನ ಸ್ನೇಹಿಯಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಮೇ.7 ರಂದು ದಿವಂಗತ ಪಿ. ಸೀತಾರಾಮ ಭಟ್ ಅವರ ಸ್ಮೃತಿ ನಮನ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿ, ಇಂತಹ ಮಹನೀಯರ ಮಾರ್ಗದರ್ಶನ ಸಮಾಜಕ್ಕೆ ಅಗತ್ಯವಿತ್ತು, ಅವರ ಅಗಲುವಿಕೆ ನಿಜಾರ್ಥದಲ್ಲಿ ಸಮಾಜಕ್ಕೆ ಭರಿಸಲಾರದ ನಷ್ಟ ಎಂದರು.
ನಗರದ ಅಶೋಕನಗರ, ಗೋಕುಲ ಕಲ್ಯಾಣ ಮಂಟಪದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ, ಡಾ. ಎಂ.ಬಿ. ಪುರಾಣಿಕ್, ಶ್ರೀ ರಮೇಶ್ ತಂತ್ರಿ, ಶ್ರೀ ಸುಧಾಕರ್ ರಾವ್ ಪೇಜಾವರ ಸಹಿತ ಅನೇಕ ಗಣ್ಯರು ದಿ. ಸೀತಾರಾಮ ಭಟ್ಟರ ಸಾಮಾಜಿಕ ಕಳಕಳಿ, ಸ್ನೇಹ ಭಾವ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಗುಣಗಾನ ಮಾಡಿದರು.
ದಿ. ಸೀತಾರಾಮ್ ಭಟ್ ಇವರ ಪುತ್ರ ಅನಿಲ್ ಭಟ್, ಪತ್ನಿ ಪ್ರೇಮಾ ಭಟ್, ಪುತ್ರಿ ಅಶ್ವಿನಿ ಭಟ್ ಹಾಗೂ ಕುಟುಂಬಸ್ಥರು ಮತ್ತು ಅನೇಕ ಸಂಘ ಸಂಸ್ಥೆಗಳ ಸದಸ್ಯರುಗಳು ಉಪಸ್ಥಿತರಿದ್ದರು. ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.