Udupi: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ಕೋಟ ಶ್ರೀನಿವಾಸ ಪೂಜಾರಿ
Tuesday, May 28, 2024
ಉಡುಪಿ: ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿರುವುದು ದುರಂತ. ಡೆತ್ ನೋಟ್ ಬರೆದಿಟ್ಟು ನಿಗಮದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಸಚಿವ ಬಿ. ನಾಗೇಂದ್ರ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನ. ವಾಲ್ಮೀಕಿ ನಿಗಮದಲ್ಲಿ 80 ಕೋಟಿ ರೂ. ಹಣವನ್ನು ಸಚಿವರ ಸೂಚನೆ ಮೇರೆಗೆ ದುರುಪಯೋಗ ಮಾಡಲಾಗಿದೆ. ಅದು ಬಡವರ ಮಕ್ಕಳಿಗೆ ಮೀಸಲಿಟ್ಟ ಹಣ. ಬಡವರ ಬಗ್ಗೆ, ದಲಿತರ ಬಗ್ಗೆ ಕಾಳಜಿ ಇದೆ ಎನ್ನುತ್ತೀರಿ, ಇದು ನಿಮ್ಮ ಕಾಳಜಿಯ ದ್ಯೋತಕವೇ ಎಂದು ಕೋಟ ಪ್ರಶ್ನಿಸಿದರು.
ಸಚಿವ ನಾಗೇಂದ್ರ ವಿರುದ್ಧ ನೇರ ಆರೋಪ ಮಾಡಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೂಡ ಸಚಿವರನ್ನು ಸಚಿವ ಸಂಪುಟದಲ್ಲಿ ಹೇಗೆ ಮುಂದುವರಿಸಿಕೊಂಡು ಹೋಗುತ್ತೀರಿ? ತಕ್ಷಣ ಸಚಿವ ನಾಗೇಂದ್ರ ಅವರನ್ನು ಕೈಬಿಡಿ. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಕಿಡಿ ಕಾರಿದರು.