
Bangalore: ರಾಜ್ಯದ ಜನತೆಗೆ ತಟ್ಟಿದ ಬಿಸಿ-ಪೆಟ್ರೋಲ್ಗೆ 3 ರೂ., ಡಿಸೇಲ್ಗೆ 3.50 ರೂ. ಹೆಚ್ಚಳ
ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೆ ರಾಜ್ಯ ಸರಕಾರವು ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಇದರಿಂದಾಗಿ, ಪೆಟ್ರೋಲ್ ಪ್ರತಿ ಲೀಟರ್ಗೆ 3 ರೂ. ಹಾಗೂ ಡಿಸೇಲ್ ಪ್ರತಿ ಲೀಟರ್ಗೆ 3.50 ರೂ. ಹೆಚ್ಚಳ ಆಗಲಿದೆ. ಪೆಟ್ರೋಲ್ ಹಾಲಿ ಇದ್ದ ದರ ಪ್ರತಿ ಲೀಟರ್ಗೆ 99.83 ರೂ. ಇದ್ದು, ಹೊಸ ದರ 102.85 ರೂ., ಡಿಸೇಲ್ ಹಾಲಿ ಇದ್ದ ದರ ಪ್ರತಿ ಲೀಟರ್ಗೆ 85.93 ರೂ., ಹೊಸ ದರ 88.93 ರೂ. ಆಗಿದೆ.
ಈ ಹಿಂದೆ ಶೇ.25.92ರಷ್ಟಿದ್ದ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈಗ ಶೇ.3.9ರಷ್ಟು ಹೆಚ್ಚಳ ಮಾಡಿರುವುದರಿಂದ ಶೇ.29.48ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಶೇ.14.34ರಷ್ಟು ಇದ್ದ ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಶೇ.4.1ರಷ್ಟು ಹೆಚ್ಚಳ ಮಾಡಿರುವುದರಿಂದ ಶೇ.14.44ಕ್ಕೆ ಏರಿಕೆಯಾಗಿದೆ.
ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ರಾಜ್ಯ ಸರಕಾರದ ನಿರ್ಧಾರದಿಂದ ಮತ್ತಷ್ಟು ಸಂಕಷ್ಟ ಎದುರಾಗುವಂತೆ ಆಗಿದೆ. ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳವಾಗುವುದರಿಂದ ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟ ವೆಚ್ಚವು ಅಧಿಕವಾಗಲಿದೆ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಢೀಕರಿಸಲು ರಾಜ್ಯ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.