
Kundapura: ಸಮುದ್ರದಲ್ಲಿ ಕೊಚ್ಚಿಹೋದ ಯುವಕನ ಶವ ಕಾರವಾರದಲ್ಲಿ ಪತ್ತೆ
ಕುಂದಾಪುರ: ಸ್ನೇಹಿತನೊಂದಿಗೆ ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ಸಮುದ್ರ ವಿಹಾರಕ್ಕೆ ತೆರಳಿ ನೀರಿಗಿಳಿದು ಸಮುದ್ರದ ಅಲೆಗೆ ಕೊಚ್ಚಿ ಹೋದ ಯುವಕನ ಶವ 7 ದಿನಗಳ ಬಳಿಕ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲ ತೀರದಲ್ಲಿ ಪತ್ತೆಯಾಗಿದೆ.
ಮೃತ ಯುವಕ ತುಮಕೂರು ಜಿಲ್ಲೆಯ ತಿಪಟೂರಿನ ರಾಜೇಶ್ ಅವರ ಪುತ್ರ ಯೋಗೀಶ್ (23) ಎಂದು ಗುರುತಿಸಲಾಗಿದೆ.
ಇವರು ಜೂ.20 ರಂದು ನಡೆದ ತನ್ನ ಸ್ನೇಹಿತ, ಬೀಜಾಡಿಯ ವಿನಯ್ ಅವರ ಅಕ್ಕನ ಮದುವೆಗೆಂದು ಊರಿಂದ ತನ್ನ ಸ್ನೇಹಿತ ಸಂದೀಪನೊಂದಿಗೆ ಜೂ.19 ರ ಬೆಳಿಗ್ಗೆ ಕುಂದಾಪುರ ತಾಲೂಕಿನ ಬೀಜಾಡಿಗೆ ಬಂದಿದ್ದರು. ಸಂಜೆ ವೇಳೆ ಬೀಜಾಡಿ ಬೀಚ್ಗೆ ಯೋಗೀಶ್ ಹಾಗೂ ಸಂದೀಪ್ ವಿಹಾರಕ್ಕೆಂದು ಹೋಗಿದ್ದು ಯೋಗೀಶ್ ಸಮುದ್ರದ ನೀರಿಗಿಳಿದಿದ್ದಾರೆ.
ಈ ವೇಳೆ ಸಮುದ್ರದ ಅಲೆಯಬ್ಬರಕ್ಕೆ ಯೋಗೀಶ್ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಜತೆಗಿದ್ದ ಸಂದೀಪ್ ಅವರು ಯೋಗೀಶ್ ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಕೂಡಾ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಅಂದಿನಿಂದ ನಿರಂತರವಾಗಿ ಅವರಿಗಾಗಿ ಶೋಧನೆ ನಡೆಸಲಾಗುತ್ತಿತ್ತು. ಆದರೆ 7 ದಿನಗಳ ಬಳಿಕ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲ ತೀರದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.