
Mangalore: ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿ ಜಾರಿ ಮಾಡಲು ಹೊರಟ ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ಬೇಡಿಕೆ ದಿನಾಚರಣೆ
ಮಂಗಳೂರು: ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿ ಜಾರಿ ಮಾಡಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಹಲವು ರೀತಿಯ ಬೇಡಿಕೆಗಳನ್ನು ಮುಂದಿಟ್ಟು ಜು.10 ರಂದು ದೇಶಾದ್ಯಂತ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಬೇಡಿಕೆ ದಿನಾಚರಣೆ ನಡೆಸಬೇಕೆಂಬ ಸಿಐಟಿಯು ಅಖಿಲ ಭಾರತ ಕರೆಯ ಮೇರೆಗೆ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ವಿಭಾಗದ ಕಾರ್ಮಿಕರು ದೇಶವನ್ನು ಲೂಟಿಗೈದ ನರೇಂದ್ರ ಮೋದಿ ಸರಕಾರದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅವರು, ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವು ದೇಶವನ್ನು ತೀರಾ ಅಧೋಗತಿಗೆ ತಳ್ಳಿದ್ದು, ದೇಶದ ಅರ್ಥ ವ್ಯವಸ್ಥೆಯೇ ತೀರಾ ಸಂಕಷ್ಟದಲ್ಲಿದೆ. ಇವುಗಳ ವಿರುದ್ಧ ಬೆಳೆದುಬಂದ ರೈತ ಕಾರ್ಮಿಕರ ಹೋರಾಟಗಳಿಂದಾಗಿ ನಿರುದ್ಯೋಗ, ಬೆಲೆಯೇರಿಕೆ ರೈತ ಕಾರ್ಮಿಕರ ಸಂಕಷ್ಟಗಳು, ಸರಕಾರದ ಮಾರಕ ಧಾಳಿಗಳ ಬಗ್ಗೆ ಜನತೆಯ ಹಾಗೂ ಜಗತ್ತಿನ ಗಮನ ಸೆಳೆಯಲು ಸಾಧ್ಯವಾಯಿತು. ಮಾತ್ರವಲ್ಲದೆ ಈ ಬಾರಿಯ ಚುನಾವಣೆಯಲ್ಲಿಯೂ ದೇಶದ ಜನತೆ ತಕ್ಕಪಾಠವನ್ನು ಕಲಿಸಿದ್ದಾರೆ. ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿ ನಾಲ್ಕೈದು ವರ್ಷ ಕಳೆದರೂ ಜಾರಿಗೆ ತರಲು ಅಡ್ಡಿಯಾಗಿರುವುದು ಕಾರ್ಮಿಕ ವರ್ಗದ ಸಮರಧೀರ ಹೋರಾಟವೇ ಅಗಿದೆ. ನೂತನ ಕೇಂದ್ರ ಸರಕಾರದ ಮೊದಲ 100 ದಿನಗಳಲ್ಲಿ ಕಾರ್ಮಿಕ ಕಾನೂನುಗಳ ವಿರುದ್ಧ ತೀವ್ರ ಧಾಳಿ ನಡೆಸಲು ಸಜ್ಜಾಗಿರುವ ಕೇಂದ್ರ ಸರಕಾರದ ವಿರುದ್ಧ ಸಮರಶೀಲ ಹೋರಾಟವನ್ನು ನಡೆಸಲು ಕಾರ್ಮಿಕ ವರ್ಗ ಸಜ್ಜಾಗಬೇಕೆಂದು ಕರೆ ನೀಡಿದರು.
ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ನವ ಉದಾರೀಕರಣ ನೀತಿಗಳ ಫಲವಾಗಿ ಕಾರ್ಮಿಕ ವರ್ಗ ವಿಪರೀತ ಸಂಕಷ್ಟಗಳಿಗೆ ಒಳಗಾಗಿದ್ದು ಕಳೆದ ಕೆಲವು ದಶಕಗಳಿಂದ ಪರಿಣಾಮಕಾರಿ ಹೋರಾಟಗಳ ಮೂಲಕ ಆಳುವ ವರ್ಗದ ನಿದ್ದೆಗೆಡಿಸಿದೆ. ಕೇಂದ್ರದಲ್ಲಿ ಅಧಿಕಾರಕ್ಕೇರಿದ ನೂತನ ಸರಕಾರ ಮತ್ತೆ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ಜಾರಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಕಾರ್ಪೊರೇಟ್ ಕಂಪೆನಿಗಳನ್ನು ಮೆಚ್ಚಿಸಲು ಹೊರಟಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷರೂ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರಕಾರ 3 ಕರಾಳ ಕಾನೂನುಗಳನ್ನು ಜಾರಿಗೊಳಿಸಿ ದುಡಿಯುವ ವರ್ಗದ ಮೇಲೆ ವ್ಯಾಪಕ ದಾಳಿ ನಡೆಸಲು ತಯಾರಾಗಿದೆ. ನೂತನ ಕ್ರಿಮಿನಲ್ ಸೆಕ್ಷನ್ ೨೮೫ ಜಾರಿ ಮಾಡಿ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಅವರು ದೇಶದ ಕಾರ್ಮಿಕ ವರ್ಗ ಕೇಂದ್ರ ಸರಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.
ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ಸಂಘದ ನಾಯಕರಾದ ಸದಾಶಿವದಾಸ್, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ರಾಧಾಕೃಷ್ಣ ಬೊಂಡಂತಿಲ, ಡಿವೈಎಫ್ಐ ನಾಯಕರಾದ ಸಂತೋಷ್ ಬಜಾಲ್, ಮಹಿಳಾ ಮುಖಂಡರಾದ ಯೋಗಿತಾ ಉಳ್ಳಾಲ ಭಾಗವಹಿಸಿದ್ದರು.
ಪ್ರತಿಭಟನೆಯ ನೇತ್ರತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಅಶೋಕ್ ಶ್ರೀಯಾನ್, ನಾಗೇಶ್ ಕೋಟ್ಯಾನ್, ಭವಾನಿ ವಾಮಂಜೂರು, ಲೋಲಾಕ್ಷಿ ಬಂಟ್ವಾಳ, ಮಹಮ್ಮದ್ ಮುಸ್ತಾಫ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಬ್ದುಲ್ ರೆಹಮಾನ್, ಮುಝಾಫರ್, ಆದಂ ಬಜಾಲ್, ಗಜಾನನ ಮತ್ತಿತರರು ವಹಿಸಿದ್ದರು.
ಹೋರಾಟದ ಬಳಿಕ ಸಿಐಟಿಯು ಉನ್ನತ ಮಟ್ಟದ ನಿಯೋಗವೊಂದು ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬೇಡಿಕೆಗಳನ್ನು ಹೊಂದಿರುವ ಮನವಿಯನ್ನು ಅರ್ಪಿಸಲಾಯಿತು.