Mangalore: ಹೊಲಿಗೆ ಯಂತ್ರ ವಿತರಣೆ
Sunday, July 7, 2024
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ದೃಷ್ಟಿಯಿಂದ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆಯಿತು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಹಿಳಾ ಮೋರ್ಚಾದವರು ದಾನಿಗಳ ಸಹಾಯದಿಂದ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯವಾದುದು. ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಲು ಹೊಲಿಗೆ ಯಂತ್ರದ ಕೊಡುಗೆ ಬಹಳ. ಅವರು ತಮ್ಮ ಮನೆಯ ನಿರ್ವಹಣೆಯಲ್ಲದೇ ಸಾಮಾಜಿಕವಾಗಿಯೂ ಹೆಚ್ಚು ಜವಾಬ್ದಾರಿ ಹಾಗೂ ಕಳಕಳಿ ಹೊಂದಿರುವವರು. ಕೋವಿಡ್ ಸಂಕಷ್ಟದ ಸಮಯದಲ್ಲಿ ನಮ್ಮ ಜಿಲ್ಲೆಯ ಇಂತಹದೇ ಮಹಿಳೆಯರು ಮನೆಯಲ್ಲೇ ಕೂತು ಕೋವಿಡ್ ವಾರಿಯರ್ ಗಳಿಗೆ ಸಾವಿರಾರು ಮಾಸ್ಕ್ ಗಳನ್ನು ತಯಾರಿಸಿಕೊಟ್ಟಿದ್ದರು. ಅವರ ಈ ಕಾರ್ಯವನ್ನು ನಾನಂತೂ ಎಂದಿಗೂ ಮರೆಯುವುದಿಲ್ಲ. ಇಂತಹ ಸ್ವಾವಲಂಬಿ ತಾಯಂದಿರ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸಿದರು.
ರಮೇಶ್ ಕಂಡೆಟ್ಟು, ಪೂರ್ಣಿಮಾ, ವಿಜಯ್ ಕುಮಾರ್ ಶೆಟ್ಟಿ, ಪೂರ್ಣಿಮಾ ರಾವ್, ರವಿಶಂಕರ್ ಮಿಜಾರ್, ಅಜಯ್ ಕುಲಶೇಖರ, ಹರೀಶ್ ರೈ, ಶಬರಿ, ಕಮಲಾಕ್ಷಿ, ಸಂಧ್ಯಾ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.