ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವ
ಮುಲ್ಕಿ: ಹಳೆಯಂಗಡಿ-ಮುಲ್ಕಿ ವಲಯದ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ ವತಿಯಿಂದ ಪ್ರಥಮ ಬಾರಿಗೆ ಹಳೆಯಂಗಡಿ-ಮುಲ್ಕಿ ತಾಲೂಕು ಮಟ್ಟದ ಮಹಾ ನಾಯಕ ಜೈ ಭೀಮ್ ಜಯಂತ್ಯೋತ್ಸವ-2024, ದಲಿತ ಸಮುದಾಯದ ಸ್ವಾಭಿಮಾನಿ ಬಾಂಧವರಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವ ಹಾಗೂ ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಗೌರವಧನ ವಿತರಣೆ ಕಾರ್ಯಕ್ರಮ ಹಳೆಯಂಗಡಿಯ ಇಂದಿರಾ ನಗರ ಸಭಾಭವನದಲ್ಲಿ ಭಾನುವಾರ ನಡೆಯಿತು.
ಮಂಗಳೂರು ಜಿಲ್ಲಾ ಎಸ್ಸಿ/ಎಸ್ಟಿ ಜಾಗೃತಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಬಗ್ಗೆ ಕಲ್ಬುರ್ಗಿಯ ಭಾಷಣಕಾರರಾದ ವಿಠಲ್ ವಗ್ಗನ್ ಮಾತನಾಡಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಸ್ಸಿ/ಎಸ್ಟಿ ಹಾಗೂ ಓಬಿಸಿ ಜನಾಂಗಕ್ಕೆ ಅಕ್ಷರ ಅರಿವು ಅನ್ನ ಅಧಿಕಾರ ಆತ್ಮಭಿಮಾನ ನೀಡಿದವರು. ನಮಗೆ ಯಾವ ನಾಯಕರು ಇಲ್ಲ ಗುಲಾಮರಾಗಿ ಬದುಕಬೇಡಿ ಎಂದು ಹೇಳಿದವರು ಡಾ. ಬಿ.ಆರ್. ಅಂಬೇಡ್ಕರ್ರವರಾಗಿದ್ದು ಅವರ ಆದರ್ಶಗಳನ್ನು ಪಾಲಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ದ.ಸಂ.ಸ. ಜಿಲ್ಲಾ ಸಂಚಾಲಕ ಸದಾಶಿವ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೈಸೂರು ವಿಭಾಗೀಯ ದ.ಸಂ.ಸ ಸಂಚಾಲಕ(ಭೀಮವಾದ) ವಿಶ್ವನಾಥ ಬೆಳ್ಳಂಪಳ್ಳಿ, ದ.ಕ. ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ, ಮುಲ್ಕಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ವಿದ್ಯಾಧರ ಡಿ, ತಾಲೂಕು ದ.ಸಂ.ಸ. ಸಂಚಾಲಕ ಕೃಷ್ಣ ಉಪಸ್ಥಿತರಿದ್ದರು.
ಬಳಿಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವ ಹಾಗೂ ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಗೌರವಧನ ವಿತರಣೆ ಕಾರ್ಯಕ್ರಮ ನಡೆಯಿತು.