Putturu: ಜಿಲ್ಲೆಯ ಶಾಸಕರೇ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗಿ: ಬಿ.ಎಂ. ಭಟ್ ಆಗ್ರಹ
Sunday, July 14, 2024
ಪುತ್ತೂರು: ಜಿಲ್ಲೆಯಲ್ಲಿ ಡೆಂಗ್ಯೂ ಸೇರಿದಂತೆ ಮಾರಕ ರೋಗಗಳಿಗೆ ಜನ ಬಲಿಯಾಗುತ್ತಿದ್ದಾರೆ. ಆದರೆ ಜಿಲ್ಲೆಯ 8 ಶಾಸಕರು ಯಾವುದೇ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಮತ್ತು ಸರ್ಕಾರ ತಮ್ಮ ಕರ್ತವ್ಯ ಮರೆತು ಕೂತಿದೆ. ಜನರ ಜೀವದ ಜತೆಗೆ ಆಟವಾಡುವ ಸ್ಥಿತಿ ಕಂಡುಬರುತ್ತಿದೆ. ಆರೋಗ್ಯ ಇಲಾಖೆ ಚಳಿ ಬಿಟ್ಟು ಕೆಲಸ ಮಾಡದಿದ್ದರೆ ಜಿಲ್ಲಾ ಆರೋಗ್ಯ ಇಲಾಖೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿಪಿಐಎಂ ಮುಖಂಡ ಬಿ.ಎಂ. ಭಟ್ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಮಳೆಗಾಲದ ಮೊದಲೇ ಕೊಳಚೆ ಪ್ರದೇಶದ ಸ್ವಚ್ಛತೆ ನಡೆಸಬೇಕಿತ್ತು. ಸೊಳ್ಳೆ ಉತ್ಪಾದನಾ ಕೇಂದ್ರ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕ್ರಿಮಿನಾಶಕ ಸಿಂಪಡಿಸುವ ಕೆಲಸ ನಡೆಸಬೇಕಿತ್ತು. ಜನತೆಯ ಆರೋಗ್ಯ ರಕ್ಷಣೆ, ರೋಗ ಹರಡದಂತೆ ಎಚ್ಚರಿಕೆ ವಹಿಸುವುದು ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಇಲಾಖೆಗಳು ಸೇವಾಮನೋಭಾವ ಕಳೆದುಕೊಂಡಂತೆ ಕಾಣುತ್ತಿದೆ. ಜನತರ ಆರೋಗ್ಯರಕ್ಷಣೆಯಲ್ಲೂ ಲಾಭದ ಲೆಕ್ಕಾಚಾರ ನೋಡುವುದು ಜನತೆಯ ಜೀವದ ಮೇಲೆ ಆಟ ಆಡಿದಂತೆ. ಆದ್ದರಿಂದ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಸರ್ಕಾರ-ಆರೋಗ್ಯ ಇಲಾಖೆ ಮಾರಕ ಕಾಯಿಲೆಗಳಿಂದ ಜನತೆಯ ಜೀವ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.