
Sulya: ಮದ್ಯಪಾನಿಗಳನ್ನು ಓಡಿಸಲು ಮದ್ಯ ಸೇವಿಸಿ ಬಂದ ಪೊಲೀಸರು...!
ಸುಳ್ಯ: ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೊಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.
ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುತ್ತಿದೆ. ಬುಧವಾರ ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕುಡಿದು ಮಲಗಿದ್ದವರಿಂದ ತೊಂದರೆ ಆಗುತ್ತಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ದೂರು ಹೇಳಿದ್ದರು.
ಬಸ್ ನಿಲ್ದಾಣದಲ್ಲಿದ್ದ ಕುಡುಕರು ಅಲ್ಲಿ ಬಾಟಲಿ ಒಡೆದು ಬಾಟಲಿ ಚೂರುಗಳನ್ನು ಚೆಲ್ಲಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಮಹಿಳೆಯ ಕರೆಯ ಆಧಾರದಲ್ಲಿ ಹೊಯ್ಸಳ ಪೊಲೀಸರು ಗುತ್ತಿಗಾರಿಗೆ ಬಂದಿದ್ದು, ಅವರು ಕುಡುಕರನ್ನು ಗದರಿಸದೆ ಇದ್ದುದನ್ನು ಕಂಡು ಸಾರ್ವಜನಿಕರು ಅನುಮಾನಗೊಂಡರು. ಪೊಲೀಸರೇ ಕುಡಿದು ಬಂದಿದ್ದಾರೆಂದು ತಿಳಿದುಕೊಂಡ ಸಾರ್ವಜನಿಕರು ಮೊಬೈಲ್ ನಲ್ಲಿ ಪೊಲೀಸರ ಚಲನವಲನವನ್ನು ಸೆರೆ ಹಿಡಿದಿದ್ದಾರೆ. ಇನ್ನು ಕೆಲ ಮಂದಿ ನೇರವಾಗಿ ಪೊಲೀಸರನ್ನು ಈ ಬಗ್ಗೆ ಪ್ರಶ್ನಿಸಿ, ಅದನ್ನು ವೀಡಿಯೊ ಮಾಡಿಕೊಂಡರು. ಜೊತೆಗೆ ’ಕುಡಿದು ವಾಹನ ಚಲಾಯಿಸಬೇಡಿ’ ಎಂದು ಪೊಲೀಸರಿಗೇ ಬುದ್ದಿ ಹೇಳುತ್ತಿರುವ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.