
Ujire: ಸೆಲ್ಕೋ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಅನ್ನಪೂರ್ಣ ಛತ್ರ-ಕಾರ್ ಮ್ಯೂಸಿಯಂನಲ್ಲಿ ಸೌರಶಕ್ತಿ ಬಳಕೆಗೆ ಚಾಲನೆ
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಿತ್ಯವೂ ಸಾವಿರಾರು ಮಂದಿ ಭಕ್ತಾದಿಗಳಿಗೆ ನಡೆಯುತ್ತಿರುವ ಅನ್ನದಾನದ ಪುಣ್ಯಕಾರ್ಯಕ್ಕೆ ಸೆಲ್ಕೊ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ವಿದ್ಯುತ್ ಪೂರೈಕೆ ಅಳವಡಿಸಿರುವ ಸೆಲ್ಕೊ ಪ್ರತಿಷ್ಠಾನದ ಅಧಿಕಾರಿಗಳನ್ನು ಅಭಿನಂಧಿಸುವುದಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಅನ್ನಪೂರ್ಣ ಛತ್ರದಲ್ಲಿ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಸೌರಶಕ್ತಿ ಬಳಕೆಗೆ ಚಾಲನೆ ನೀಡಿ ಶುಭ ಹಾರೈಸಿ, ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಇತರ ಸಂಸ್ಥೆಗಳೂ ಇದನ್ನು ಅನುಸರಿಸಬಹುದು ಎಂದು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸೌರಶಕ್ತಿ ಬಳಕೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅರಿವು, ಜಾಗೃತಿ ಮೂಡಿಸಿ ಸೌರಶಕ್ತಿಯನ್ನು ಬಳಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಲಂಡನ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಆಶ್ಡೆನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಧನ್ಯತೆಯಿಂದ ಸ್ಮರಿಸಿಕೊಂಡರು.
ಸದ್ಯದಲ್ಲೆ ಧರ್ಮಸ್ಥಳದಿಂದ ಕೆಲವು ಹಿರಿಯ ನೌಕರರು ಶಿರ್ಡಿಗೆ ಹೋಗಿ ಸೌರಶ್ತಿ ಬಳಕೆ ಬಗ್ಯೆ ಅಧ್ಯಯನ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುವರು. ಮುಂದೆ ಇಲ್ಲಿನ ಎಲ್ಲಾ ವಸತಿಛತ್ರಗಳು ಹಾಗೂ ಕಚೇರಿಗಳಲ್ಲಿಯೂ ಸೌರಶಕ್ತಿಯ ಸದುಪಯೋಗ ಮಾಡಲಾಗುವುದು ಎಂದು ಹೇಳಿದರು.
ಸೆಲ್ಕೊ ಪ್ರತಿಷ್ಠಾನದ ಸಿ.ಇ.ಒ. ಭಾಸ್ಕರಮೋಹನ ಹೆಗಡೆ ಮಾತನಾಡಿ, ಹರೀಶ್ ಹಂದೆಯವರ ನೇತೃತ್ವ ಮತ್ತು ದೂರದೃಷ್ಟಿಯ ಯೋಜನೆಯಿಂದ ಸೌರಶಕ್ತಿಯ ಬಳಕೆ ಹೆಚ್ಚಾಗುತ್ತಿದೆ. ಸೆಲ್ಕೊ ಪ್ರತಿಷ್ಠಾನವು ಜನರ ಅವಶ್ಯಕತೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಹೊರತು ಲಾಭದ ದೃಷ್ಟಿಕೋನದಿಂದ ಅಲ್ಲ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 2001 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 1500 ಸೌರಘಟಕಗಳನ್ನು ಪ್ರಾರಂಭಿಸಿದ್ದು ಈಗ ಮೂರು ಲಕ್ಷ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದ ಅವರು ಅನೇಕ ಬ್ಯಾಂಕ್ಗಳು ಮತ್ತು ವಿದೇಶಿ ಕಂಪೆನಿಗಳು ಕೂಡಾ ಸೌರಶಕ್ತಿ ಬಳಕೆ ಬಗ್ಗೆ ಸೆಲ್ಕೊ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಇದರಿಂದಾಗಿ ಜನರ ಬದುಕು ಮತ್ತು ಮನಸು ಹಸನಾಗಿದೆ ಎಂದರು.
ಅನೇಕ ಮಂದಿ ಸೌರಶಕ್ತಿ ಬಳಕೆಯಿಂದ ಸ್ವ-ಉದ್ಯೋಗವನ್ನೂ ಯಶಸ್ವಿಯಾಗಿ ಪ್ರಾರಂಭಿಸಿದ್ದಾರೆ ಎಂದರು. ಧಾರವಾಡದಲ್ಲಿರುವ ಧರ್ಮಸ್ಥಳದ ತರಬೇತಿ ಸಂಸ್ಥೆಯಲ್ಲಿ ವರ್ಷಕ್ಕೆ ಎರಡೂವರೆ ಸಾವಿರ ಯುವತಿಯರಿಗೆ ತರಬೇತಿ ನೀಡುತ್ತಿದ್ದು ಅವರು ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಉಜ್ವಲ ಯೋಜನೆಯಂತೆ ಸೌರಶಕ್ತಿ ಬಳಸಿದಾಗ ಸರ್ಕಾರದಿಂದ ಸಹಾಯಧನವೂ ಸಿಗುತ್ತದೆ ಎಂದರು.
ಸೆಲ್ಕೊ ಪ್ರತಿಷ್ಠಾನಕ್ಕೆ ಆರಂಭದಿಂದಲೂ ಸೌರಶಕ್ತಿ ಬಳಕೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ನಿರಂತರ ಮಾರ್ಗದರ್ಶನ, ಪ್ರೇರಣೆ ಮತ್ತು ಪ್ರೋತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.
ಸೆಲ್ಕೋದ ಡಿ.ಜಿ.ಎಂ. ಗುರುಪ್ರಸಾದ್ ಉಪಸ್ಥಿತರಿದ್ದರು.
ಅನ್ನಪೂರ್ಣ ಛತ್ರಕ್ಕೆ 32 ಕಿಲೊ ವಾಟ್ ಸಾಮರ್ಥ್ಯದ ಘಟಕ ಹಾಗೂ ಕಾರ್ ಮ್ಯೂಸಿಯಂಗೆ 5 ಕಿಲೊವಾಟ್ ಸಾಮರ್ಥ್ಯದ ಘಟಕ ಸೇರಿದಂತೆ ಒಟ್ಟು 37 ಕಿಲೊವಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಅಳವಡಿಸಿ ಸೌರಶಕ್ತಿ ಬಳಕೆಯೊಂದಿಗೆ ವಿದ್ಯುತ್ ದೀಪ ಮತ್ತು ಫ್ಯಾನುಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿ, ನವೀನ್ ಬೆಳ್ತಂಗಡಿ ವಂದಿಸಿದರು.