ಮಾರಿಪಳ್ಳ ಜಂಕ್ಷನ್ನಲ್ಲಿ ಲಾರಿ-ಬೈಕ್ ನಡುವೆ ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ
ಬಂಟ್ವಾಳ: ಫರಂಗಿಪೇಟೆ ಸಮೀಪದ ಮಾರಿಪಳ್ಳ ಜಂಕ್ಷನ್ ಎಂಬಲ್ಲಿ ಮಂಗಳವಾರ ಲಾರಿ-ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರ ಪೈಕಿ ಓರ್ವ ಸಹಪ್ರಯಾಣಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುಳ್ಯ ನಿವಾಸಿ ಸೇವಂತ್ (21) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಚೇತಕ್ ಹಾಗೂ ಯತೀಶ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸೇವಂತ್ ಸ್ನೇಹಿತರ ಜೊತೆ ಸುಳ್ಯಕ್ಕೆ ತೆರಳಿದ್ದ. ಸಂಜೆ ಕಾಲೇಜು ಮುಗಿಸಿ ನೇರವಾಗಿ ಇಬ್ಬರು ಸ್ನೇಹಿತರ ಜೊತೆ ಅವರ ರೂಮ್ಗೆ ತೆರಳಿ ತಡರಾತ್ರಿ ಸುಳ್ಯ ಕಡೆಗೆ ಹೊರಟಿದ್ದರೆನ್ನಲಾಗಿದೆ.
ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಚಾಲಕ ಮಾರಿಪಳ್ಳ ಜಂಕ್ಷನ್ನಲ್ಲಿ ವಾಪಸು ಪರಂಗಿಪೇಟೆ ಕಡೆಗೆ ತೆರಳಲು ತಿರುಗಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಪರಿಣಾಮ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಂಭೀರವಾಗಿ ಗಾಯವಾಗಿತ್ತು. ಈ ಪೈಕಿ ಸೇವಂತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.