ಮೈಸೂರು ವಿಭಾಗ ಮಟ್ಟದ ರೆಡ್ಕ್ರಾಸ್ ಪ್ರೇರಣಾ ಶಿಬಿರದ ಸಮಾರೋಪ
ನಿಸ್ವಾರ್ಥ ಸೇವೆಗೆ ಯುವ ರೆಡ್ ಕ್ರಾಸ್ ಪ್ರೇರಣೆ: ಡಾ. ಶಿವಪ್ರಸಾದ ಕೆ.
ಮಂಗಳೂರು: ಸದ್ವಿಚಾರ ಹಾಗೂ ಸೇವಾ ಮನೋಭಾವ ಹೊಂದಿರುವ ಯುವ ಸಮುದಾಯದಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಅಂತಹ ನಿಸ್ವಾರ್ಥ ಸೇವೆಗೆ ಯುವ ರೆಡ್ಕ್ರಾಸ್ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದ್ದು, ಯುವ ಶಕ್ತಿಯನ್ನು ಜಾಗೃತಿಗೊಳಿಸುತ್ತಿದೆ ಎಂದು ಯೇನೆಪೊಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ಹೇಳಿದರು.
ರೆಡ್ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಶಾಖೆ ಮತ್ತು ಕರ್ನಾಟಕ ರಾಜ್ಯ ಶಾಖೆ ವತಿಯಿಂದ ಮಂಗಳೂರು ವಿಶ್ವ ವಿದ್ಯಾನಿಲಯದ ಯುವ ರೆಡ್ಕ್ರಾಸ್ ವಿಭಾಗದ ಸಹಯೋಗದಲ್ಲಿ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜನೆಗೊಂಡ ಮೂರು ದಿನಗಳ ಮೈಸೂರು ವಿಭಾಗ ಮಟ್ಟದ ಯುವ ರೆಡ್ಕ್ರಾಸ್ ಪ್ರೇರಣಾ ಶಿಬಿರದ ಅಂಗವಾಗಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಪ್ರೇರಣಾ ಶಿಬಿರ. ಯುವ ರೆಡ್ಕ್ರಾಸ್ನ ಸ್ವಯಂ ಸೇವಕರಿಗೆ ದೊರೆತ ಉತ್ತಮ ಅವಕಾಶವಾಗಿದ್ದು, ಶಿಬಿರದಲ್ಲಿ ಕಲಿತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್, ಮಂಗಳೂರು ವಿ.ವಿ. ಯುವ ರೆಡ್ಕ್ರಾಸ್ನ ಸಲಹಾ ಸಮಿತಿ ಸದಸ್ಯ ನಿತ್ಯಾನಂದ ಶೆಟ್ಟಿ, ನೋಡಲ್ ಅಧಿಕಾರಿ ಡಾ. ಗಾಯತ್ರಿ ಅಮೀನ್, ಜಿಲ್ಲಾ ರೆಡ್ಕ್ರಾಸ್ ಆಡಳಿತ ಮಂಡಳಿ ನಿರ್ದೇಶಕ ಪಿ.ಬಿ. ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಬಿರಾರ್ಥಿಗಳಾದ ಕುಂದಾಪುರದ ಹರ್ಷವರ್ಧನ ಮತ್ತು ಆದಿಚುಂಚನಗಿರಿ ವಿ.ವಿ.ಯ ಸಂಪತ್ ಅನಿಸಿಕೆಗಳನ್ನು ತಿಳಿಸಿದರು.
ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಸ್ವಾಗತಿಸಿ, ಯುವ ರೆಡ್ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ ವಂದಿಸಿದರು. ರಾಮಕೃಷ್ಣ ಕಾಲೇಜಿನ ಉಪನ್ಯಾಸ ಕ ನಟೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.