ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ ಸಮಾಜ ಮಂದಿರ ಪುರಸ್ಕಾರ-2024

ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ ಸಮಾಜ ಮಂದಿರ ಪುರಸ್ಕಾರ-2024

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ (ರಿ.) ವತಿಯಿಂದ ಜರಗುವ ಈ ಬಾರಿಯ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಂದರ್ಭದಲ್ಲಿ ಶತಮಾನದ ಇತಿಹಾಸವಿರುವ ಮೂಡುಬಿದಿರೆ ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ, ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ ‘ಸಮಾಜ ಮಂದಿರ ಪುರಸ್ಕಾರ-2024’ ಪ್ರದಾನ ನಡೆಯಲಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಮಾಜ ಮಂದಿರದಲ್ಲಿ ಅಕ್ಟೋಬರ್ 3ರಿಂದ 7ರವರೆಗೆ ನಡೆಯಲಿದ್ದು ಮೊದಲದಿನ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಂಗಳೂರು ವಿವಿಯ ಮಾನ್ಯ ಕುಲಪತಿ ಡಾ. ಪಿ.ಎಲ್. ಧರ್ಮ ಅವರು ಮೂಡುಬಿದಿರೆ ದಸರಾ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದವರು ತಿಳಿಸಿದರು.

ಇದೇ ವೇಳೆ ಸಾಹಿತ್ಯ, ಕಲೆ, ಸಂಸ್ಕೃತಿ ಸಹಿತ ವಿವಿಧ ರಂಗಗಳಲ್ಲಿ ಗುರುತಿಸಿ ಕೊಂಡ ಆಯ್ದ 17 ಸಾಧಕರಿಗೆ, ಸಂಸ್ಗೆಗಳಿಗೆ ದಸರಾ ಉತ್ಸವದ ಅವಧಿಯಲ್ಲಿ ಸಮಾಜ ಮಂದಿರ ಗೌರವ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.

ಸಮಾಜ ಮಂದಿರ ಗೌರವ ಪುರಸ್ಕೃತರು:

ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ (ರಿ.)ಮೂಡುಬಿದಿರೆ (ಸಾಂಸ್ಕೃತಿಕ), ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ (ರಿ.) (ಸಾಂಸ್ಕೃತಿಕ), ಶ್ರೀ ವೀರಮಾರುತಿ ಸೇವಾ ಟ್ರಸ್ಟ್ (ರಿ.) (ಸಾಂಸ್ಕೃತಿಕ), ಶ್ರೀ ಅಂಡಾರು ಗುಣಪಾಲ ಹೆಗ್ಡೆ (ಶೈಕ್ಷಣಿಕ), ಶ್ರೀ ರಾಮ ಕೋಟ್ಯಾನ್ (ಛಾಯಾಗ್ರಹಣ), ಗುಲಾಬಿ ಶೆಟ್ಟಿ (ಆರೋಗ್ಯ), ಶ್ರೀ ಧನಂಜಯ ಮೂಡುಬಿದಿರೆ (ಪತ್ರಿಕೋದ್ಯಮ, ಕಲೆ), ಟಿ. ರಘುವೀರ ಶೆಣೈ (ಸಮಾಜ ಸೇವೆ), ಆಂಡ್ರ್ಯೂ ಡಿ’ಸೋಜಾ (ರಂಗಭೂಮಿ), ಜಗದೀಶ್ (ವೈದ್ಯಕೀಯ), ಚಂದ್ರಶೇಖರ್ (ಸಮಾಜ ಸೇವೆ), ಸುಜಾತಾ ಶೆಟ್ಟಿ (ರಂಗಭೂಮಿ), ನಾಗರಾಜ ಶೆಟ್ಟಿ ಅಂಬೂರಿ ಬೆಳುವಾಯಿ (ಕೃಷಿ), ನಾರಾಯಣ ಆಚಾರ್ಯ ಸಂಪಿಗೆ (ಕಾಷ್ಠ ಶಿಲ್ಪ), ಅನಿತಾ ಶೆಟ್ಟಿ (ಸಾಹಿತ್ಯ), ಬಾಬು ಹಂಡೇಲು (ಸಮಾಜ ಸೇವೆ), ಅಬ್ದುಲ್ ಸಲಾಂ (ಕಲೆ, ಸಾಹಿತ್ಯ)

ಪರಿಚಯ:

ಚಂದ್ರಶೇಖರ್ ಎಂ: ಸಹಕಾರಿ ಇಲಾಖೆಯಲ್ಲಿ ವೃತ್ತಿಯನ್ನೇ ವ್ರತವಾಗಿ ಸಿಕೊಂಡು ವಿಸ್ತರಣಾಧಿಕಾರಿಯಾಗಿ ಮೀನುಗಾರಿಕಾ ಸೊಸೈಟಿ, ಪರಿಶಿಷ್ಟಜಾತಿ ವಿವಿದೋದ್ದೇಶ ಸಹಕಾರಿ, ಲ್ಯಾಂಪ್ಸ್ ಹೀಗೆ ಹತ್ತು ಹಲವು ಸಹಕಾರಿ ಸಂಸ್ಥೆಗಳ ಉಸ್ತುವಾರಿ, ಮೇಲಧಿಕಾರಿಯಾಗಿ ಅವೆಲ್ಲವನ್ನೂ ಆರ್ಥಿಕ ಸಂಕಷ್ಟದಿಂದ ಮೇಲೆತ್ತಿ ಅಭಿವೃದ್ಧಿಯ ಹಳಿಗೆ ತಂದ ಸಾಧಕ.

2002ರಿಂದ ಮೂಡುಬಿದಿರೆ ಕೋ-ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿಯಾಗಿ ಪ್ರಸ್ತುತ ವಿಶೇಷ ಕಾರ್ಯನಿರ್ವಹಣಾಧಿಕಾರಿಯಾಗಿ ಸೊಸೈಟಿಯ ಆರ್ಥಿಕ ಸರ್ವತೋಮುಖ ಬೆಳವಣಿಗೆಗೆ ಸಾರಥಿ ಯಾದವರು. ಸೊಸೈಟಿಯನ್ನು ಆರ್ಥಿಕ, ಸಾಮಾಜಿಕ, ಸಾರ್ವಜನಿಕ ನೆಲೆಯಲ್ಲಿ ಮೂಡುಬಿದಿರೆಗೆ ಮಾತ್ರವಲ್ಲ ನಾಡಿಗೆ ಮಾದರಿಯಾಗಿ ಜನಪ್ರಿಯತೆಯಿಂದ ಕಟ್ಟಿ ಬೆಳೆಸುವಲ್ಲಿ ಚಂದ್ರಶೇಖರ್ ಅವರ ದೂರದರ್ಶಿತ್ವದ ಚಿಂತನೆಗಳು ಅನನ್ಯ. ಸಾಮಾಜಿಕ, ಧಾರ್ಮಿಕ ಕಾಳಜಿಯ ತಮ್ಮ ವೃತ್ತಿಜೀವನದಲ್ಲಿ ಪ್ರಸ್ತುತ ಸುವರ್ಣ ಸಂಭ್ರಮದಲ್ಲಿರುವ ಚಂದ್ರಶೇಖರ ಎಂ, ಅವರಿಗೆ ಈ ಬಾರಿ 2024ರ ಸಮಾಜಮಂದಿರ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article