ಮಕ್ಕಳೊಂದಿಗೆ ಮಗುವಾಗಿ ಕೆಸರಿನಲ್ಲಾಡಿದ ದ.ಕ. ಜಿಲ್ಲಾಧಿಕಾರಿ

ಮಕ್ಕಳೊಂದಿಗೆ ಮಗುವಾಗಿ ಕೆಸರಿನಲ್ಲಾಡಿದ ದ.ಕ. ಜಿಲ್ಲಾಧಿಕಾರಿ


ಬಂಟ್ವಾಳ: ರೈತ ದೇಶದ ಬೆನ್ನೆಲುಬು ಸಂತೋಷದೊಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು, ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ಆತನು ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಕೃಷಿಯಿಂದ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.

ರವಿವಾರ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6ನೇ ವರ್ಷದ ‘ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಭಾಗವಹಿಸಿ, ಜಿಲ್ಲೆಯ ಒರ್ವ ಉನ್ನತ ಅಧಿಕಾರಿ ಎಂಬ ಯಾವುದೇ ಬಿಗುಮಾನವನ್ನು ಇಡದೆ ಮಕ್ಕಳ ಜೊತೆ ಮಗುವಾಗಿ ಬೆರೆತು ಕೆಸರಿನಲ್ಲಿ ಸಂಭ್ರಮಿಸಿದರು.

ಬಿರುಸಿನ ಮಳೆಯ ಸಂದರ್ಭ ರಜೆ ನೀಡುವ ಬಗ್ಗೆ ಸ್ನೇಹಿತನಂತೆ ಮಕ್ಕಳ ಜೊತೆ ವರ್ತಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ಅವರು ಕೆಸರಿನಲ್ಲೂ ಮಕ್ಕಳ ಜೊತೆಗೂಡಿ ಸಂತಸಪಟ್ಟರು. ಗ್ರಾಮಸ್ಥರು, ಮಕ್ಕಳು ಕೂಡ ಇವರೊಂದಿಗೆ ಸಂಭ್ರಮಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ವಹಿಸಿದ್ದರು.

ಡಾ. ರೂಪಲತಾ ಕೊಂಗಲಾಯಿ ಅವರು ಧ್ವಜಾರೋಹಣಗೈದರು. ಸಭಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ಉದ್ಘಾಟಿಸಿದರು. ಕ್ರೀಡಾಕೂಟದ ಕೆಸರುಗದ್ದೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೇ ನೆರವೇರಿಸಿದರು.

ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣಮೂಲ್ಯ, ಮಲರಾಯ ದೈವ ಪರಿಚಾರಕರುಗಳಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮತ್ತಿತರರು ಉಪಸ್ಥಿತರಿದ್ದರು.

ಕೆಸರು ಗದ್ದೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಮ್ಮ ತುಳುವ ಸಂಸ್ಕೃತಿಯ ಚಾಪೆ, ಬುಟ್ಟಿ ನೆಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ನೆಯ್ಯುವುದು, ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು.

ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article