ಅರ್ಚನಾ ಕಾಮತ್ ತ್ಯಾಗ ಸಂಸ್ಮರಣಾ ರಕ್ತದಾನ ಶಿಬಿರ
ಮಂಗಳೂರು: ಬದುಕಿರುವಾಗಲೇ ದೇಹದ ಅಂಗವೊಂದನ್ನು ಆಪ್ತ ಸಂಬಂಧಿಗೆ ದಾನ ಮಾಡಿ ವಿಧಿಲೀಲೆಗೆ ಬಲಿಯಾದ ಉಪನ್ಯಾಸಕಿ ಅರ್ಚನಾ ಕಾಮತ್ ಅವರ ದಿವ್ಯಾತ್ಮಕ್ಕೆ ನುಡಿ ನಮನ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರ ಮಂಗಳೂರಿನ ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.
ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಆಯೋಜಿಸಿದ ಈ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು, ಬಾಲ್ಯದಿಂದಲೇ ಪರಿಚಯರಾಗಿದ್ದ ಅರ್ಚನಾ ಕಾಮತ್ ಅವರು ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಬದುಕು ನಮಗೆ ಆದರ್ಶವಾಗಿದೆ. ಅವರ ಇಡೀ ಕುಟುಂಬ ನಮಗೆ ಆತ್ಮೀಯವಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿ ಅರ್ಚನಾ ಅವರ ಆತ್ಮೀಯರನ್ನು ಒಂದುಗೂಡಿಸಿ ಮಾದರಿ ಕಾರ್ಯ ಮಾಡಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ ಅರ್ಚನಾ ಕಾಮತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಬಗ್ಗೆ ಮಾತನಾಡುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಬೆಸೆಂಟ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಮಣೇಲ್ ಅಣ್ಣಪ್ಪ ನಾಯಕ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ಹನುಮಂತ್ ಕಾಮತ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿಯ ಮಂಗಲ್ಪಾಡಿ ನರೇಶ್ ಶೆಣೈ, ಸಿಎ ಗೌತಮ್ ಪೈ, ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಕೆನರಾ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿಎನ್ಐ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಕೆಎಂಸಿ ಆಸ್ಪತ್ರೆ, ಬೆಸೆಂಟ್ ಶಿಕ್ಷಣ ಸಂಸ್ಥೆ, ಯೂತ್ ಆಫ್ ಜಿಎಸ್ಬಿ, ಸಿಎ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ರಕ್ತದಾನ ಶಿಬಿರದಲ್ಲಿ 89 ಅಧಿಕ ನಾಗರಿಕರು ರಕ್ತದಾನ ಮಾಡಿದರು. ಅರ್ಚನಾ ಕಾಮತ್ ಅವರ ಪತಿ, ಸಹೋದರಿ ಹಾಗೂ ಸಂಬಂಧಿಕರು ರಕ್ತದಾನ ಮಾಡಿ ನೋವಿನಲ್ಲಿಯೂ ಹೃದಯ ವೈಶಾಲ್ಯದಿಂದ ಮಾದರಿಯಾದರು.


