ಅಲಂಗಾರು ಈಶ್ವರ ಭಟ್ಟರಿಗೆ 2024ರ ಶಾರದಾನುಗ್ರಹ ಪ್ರಶಸ್ತಿ
ಮೂಡುಬಿದಿರೆ: ಮೂಡುಬಿದಿರೆಯ ಪೊನ್ನೆಚಾರಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದ ಸಮಿತಿಯು ಶಾರದಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಲಂಗಾರು ಶ್ರೀ ಈಶ್ವರ ಭಟ್ ಅವರನ್ನು ಶಾರದಾನುಗ್ರಹ-2024 ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪೊನ್ನೆಚಾರಿ ಲಕ್ಷ್ಮಿ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ಪೊನ್ನೆಚಾರಿ ಶಾರದಾ ಪೂಜಾ ಮಹೋತ್ಸವ ಹಾಗೂ ಮೂಡುಬಿದಿರಿ ದಸರಾ ಉತ್ಸವದ ರೂವಾರಿ ಅಶೋಕ ಕಾಮತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐದು ಶತಮಾನಗಳ ಇತಿಹಾಸವನ್ನು ಹೊಂದಿರುವ ಪೊನ್ನಚಾರಿ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ನಡೆಯುವ ಶಾರದಾ ಮಹೋತ್ಸವ ಮುಡುಬಿದಿರೆ ದಸರಾ-2024ರ ಸಂಭ್ರಮದಲ್ಲಿ ಧಾರ್ಮಿಕ ಮುಂದಾಳು, ಹಿರಿಯ ವೇದ ವಿದ್ವಾಂಸರು ಆಗಿರುವ ವೇದಮೂರ್ತಿ ಬ್ರಹ್ಮಶ್ರೀ ಅಲಂಗಾರು ಈಶ್ವರ ಭಟ್ಟರ ನಿಸ್ವಾರ್ಥ ಮನಸ್ಸಿನ ಸೇವೆ ಮತ್ತು ಲೋಕಕಲ್ಯಾಣಕ್ಕಾಗಿ ಪುರದ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮೆಚ್ಚುಗೆಯಾಗುವುದರ ಜೊತೆಯಲ್ಲಿ ಜನರಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ.
ಎಲ್ಲ ಕಾರ್ಯಕ್ರಮದ ಮೂಲಕ ಮೂಡುಬಿದಿರೆ ಮತ್ತು ಸುತ್ತಮುತ್ತಲ ಭಕ್ತ ಬಂಧುಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮನೋಭಾವನೆಯನ್ನು ಬೆಳೆಸಿ ಧರ್ಮ ಜಾಗೃತಿಯನ್ನು ಉಂಟುಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ 2024ನೇ ಸಾಲಿನ ಶಾರದಾನುಗ್ರಹ-2024 ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಅ.10 ರಂದು ನಡೆಯುವರು ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅಶೋಕ್ ಕಾಮತ್ ಮತ್ತು ಶಾರದ ಮಹೋತ್ಸವ ಸಮಿತಿಯ ಸಾಂಸ್ಕೃತಿಕ ಸ್ಪರ್ಧಾ ಸಂಚಾಲಕ ಡಾ. ರಾಮಕೃಷ್ಣ ಶಿರೂರು ತಿಳಿಸಿದ್ದಾರೆ.